ಸುಳ್ಯ:ಕೇರಳದ ಕಾಞಂಗಾಡ್ನಿಂದ ಗಡಿ ಪ್ರದೇಶವಾದ ಬಂದಡ್ಕ ಮೂಲಕ ಸುಳ್ಯಕ್ಕೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಆ.14ರಿಂದ ಸಂಚಾರ ಪ್ರಾರಂಭಿಸಿದೆ. ಸುಳ್ಯಕ್ಕೆ ಆಗಮಿಸಿದ ಬಸ್ಗೆ ಸುಳ್ಯ ಬಸ್ ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು. ಕಾಞಂಗಾಡ್ ಡಿಪೋದಿಂದ
ಪೆರಿಯ, ಮೂನಾಂಕಡವ್- ಕುಂಡಕುಯಿ- ಬಂದಡ್ಕ- ಕನ್ನಡಿತೋಡ್-ಕೋಲ್ಚಾರ್ ಮೂಲಕ ಸುಳ್ಯಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲು
ಕೇರಳ ಸರಕಾರ ಅನುಮತಿ ನೀಡಿದೆ. ಇಂದು ಬೆಳಿಗ್ಗೆ ಕಾಞಂಗಾಡ್ನಿಂದ
ಆರಂಭಗೊಂಡ ಬಸ್ 11.30ಕ್ಕೆ ಸುಳ್ಯ ತಲುಪಿತು.ಗಡಿನಾಡ ಕನ್ನಡಿಗರ ಸಂಘದ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ, ಪ್ರಮುಖರಾದ ಸತ್ಯಕುಮಾರ್ ಆಡಿಂಜ, ಅಚ್ಚುತ ಗೌಡ, ವೆಂಕಟ್ರಮಣ ಗೌಡ ಕೊಯಿಂಗಾಜೆ, ನ.ಪಂ.ಸದಸ್ಯ ರಿಯಾಝ್ ಕಟ್ಟೆಕ್ಕಾರ್ಸ್ ಮತ್ತಿತರರು ಸೇರಿ ಸ್ವಾಗತ ಕೋರಿದರು. ಕೆಎಸ್ಆರ್ಟಿಸಿ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಬಸ್ಗೆ ವಿವಿಧ ಕಡೆಗಳಲ್ಲಿ ಸ್ವಾಗತ ನೀಡಲಾಯಿತು.
ಕುತ್ತಿಕೋಲಿನಲ್ಲಿ ಶಾಸಕ ಸಿ.ಎಚ್.ಕುಞಂಬು ಅವರ ನೇತೃತ್ವದಲ್ಲಿ

ಸ್ವಾಗತ ನೀಡಲಾಯಿತು. ಪಡ್ಪು, ಬಂದಡ್ಕ, ಕನ್ನಾಡಿತೋಡು, ಪಾಲಾರ್ ಮೂಲೆ ಮತ್ತಿತರ ಕಡೆಗಳಲ್ಲಿ ಗಡಿನಾಡ ಕನ್ನಡಿಗರ ಸಂಘ ,ಬಂದಡ್ಕ ಗ್ರಾಮ ಗೌಡ ಸಮಿತಿ ವತಿಯಿಂದ ಸ್ವಾಗತ ಕೋರಲಾಯಿತು. ಗಡಿ ಪ್ರದೇಶವಾದ ಕೋಲ್ಚಾರ್ನಲ್ಲಿಯೂ ಬಸ್ಗೆ ಸ್ವಾಗತ ನೀಡಲಾಯಿತು.
ಕಾಞಂಗಾಡ್ನಿಂದ ಸುಳ್ಯಕ್ಕೆ ಬಸ್ ಬೆಳಿಗ್ಗೆ 6.40ಕ್ಕೆ ಹೊರಟು 8.50 ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯದಿಂದ 9.10ಕ್ಕೆ ಹೊರಟು11.20ಕ್ಕೆ ಕಾಞಂಗಾಡ್ ತಲುಪುತ್ತದೆ, ಕಾಂಞಂಗಾಡ್ ಮಧ್ಯಾಹ್ನ 12.10 ಹೊರಟು, 2.20ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯ ದಿಂದ 2.40 ಹೊರಟು 4.50ಕ್ಕೆ ಕಾಞಂಗಾಡ್ ತಲುಪಲಿದೆ.ಈ ರಸ್ತೆಯಲ್ಲಿ ಬಸ್ ಸೇವೆ ಆರಂಭಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ.ಸದ್ಯ ಸುಳ್ಯ-ಕಾಞಂಗಾಡ್ ಮಧ್ಯೆ 2 ಟ್ರಿಪ್ ಬಸ್ ಓಡಾಟ ನಡೆಸಲಿದೆ.





