*ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ಎಸ್ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ನೇಗಿಲ ಯೋಗಿಯ ಬದುಕಿನ ಪಾಠವನ್ನು ಕಲಿತರು. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಉತ್ತ ಗದ್ದೆಯಲ್ಲಿ ನೇಜಿ ನಡುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು. ಗದ್ದೆಗಳಲ್ಲಿ ನೇಜಿ
ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ನೇಗಿಲ ಯೋಗಿಗಳಾದರು. ಹಿರಿಯರು ಹೇಳಿದ ಓ ಬೇಲೆ ಜನಪದ ಪದ್ಯವನ್ನು ಹಾಡುತ್ತಾ ವಿದ್ಯಾರ್ಥಿಗಳು ಉತ್ಸಾಹದಿಂದ ಭತ್ತ ನಾಟಿ ಮಾಡಿದರು. ಬೇಸಾಯ ಚಟುವಟಿಕೆ ಮರೆಯುತ್ತಿರುವ ಈ ಕಾಲದಲ್ಲಿ ಭತ್ತ ನಾಟಿ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಈ ಪ್ರಾತ್ಯಕ್ಷಿಕೆಯುಕ್ತ ಪಾಠ ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿ ನೀಡುವಲ್ಲಿ ಸಹಕಾರಿಯಾಯಿತು. ಪ್ರಾಚಾರ್ಯ ಸೋಮಶೇಖರ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಿದ್ಯಾರ್ಥಿಗಳು, ಸಾಂಪ್ರದಾಯಿಕ ಉಡುಗೆ ಧರಿಸಿ ಕೆಸರಿನ ಗದ್ದೆಗಿಳಿದು ನೇಜಿ ನಟ್ಟು ಕೈಕೆಸರಾದರೆ ಬಾಯಿ ಮೊಸರು ಎಂಬ ಪಾಠವನ್ನು ಕಲಿತರು. ರೈತನ ನಿಜ ಜೀವನದ ಕಠಿಣ ಪರಿಶ್ರಮದ ಕುರಿತು

ನೈಜ ಅನುಭವ ಪಡೆದುಕೊಂಡರು. ಈ ಕಾರ್ಯದ ಮೂಲಕ ನೇಗಿಲ ಯೋಗಿಯ ನೈಜ ಶ್ರಮ ಅರಿತರು. ಹಿರಿಯರಾದ ಮೋಂಟಿ ಅಮ್ಮ ಅವರು ಭತ್ತ ನಾಟಿ ಮಾಡುವ ವೇಳೆ ಓ..ಬೇಲೆ ಪದ ಹಾಡಿದರು. ಭತ್ತ ನಾಟಿಯ ವೇಳೆ ಓ..ಬೇಲೆ.. ಹಾಡನ್ನು ಹಾಡುತ್ತಿದ್ದರು. ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿದರು. ಹಿರಿಯರಾದ ಮೋಂಟಿ ಅಮ್ಮ ಅವರು ಪ್ರಾಚೀನ ಕಾಲದ ಸಂಪ್ರದಾಯದ ಕಷ್ಟ ಪರಿಶ್ರಮದ ಬಗ್ಗೆ ತಮ್ಮ ಅನುಭವವನ್ನು ಹೇಳಿದರು.
ವರ್ಷಧಾರೆಯ ಮಧ್ಯೆ ವಿದ್ಯಾರ್ಥಿಗಳು ತುಂಬು ಸಂತಸದಿಂದ ನಾಟಿ ಕಾರ್ಯ ನಡೆಸಿದರು. ಕಾಲೇಜಿನ 150ಕ್ಕೂ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ಕೆಸರುಮಯ ಉತ್ತ ಗದ್ದೆಯಲ್ಲಿ ಸಂಭ್ರಮಿಸಿ ಭತ್ತದ ಪೈರು ನೆಟ್ಟರು. ವಿದ್ಯಾರ್ಥಿಗಳು ನಾಟಿ ಮಾಡಲು ಗದ್ದೆಯ ಮಾಲಕರಾದ ರಾಮಣ್ಣ ವೆಂಕಮ್ಮ ರಾಮಣ್ಣ, ಅವರ ಮಕ್ಕಳಾದ ಪದ್ಮನಾಭ ಪರ್ವತಮುಖಿ, ರವಿ ನಂದನ್, ಹಿರಿಯರಾದ ಮೋಂಟಿ ಅಮ್ಮ, ರಾಮಕ್ಕ, ಶಿವಮ್ಮ, ಪಾರ್ವತಿ, ಕೆಂಚಮ್ಮ, ಸುಧಾ, ಪೂರ್ಣಿಮಾ, ಲಲಿತಾ, ಪುಷ್ಪಾ, ಕಮಲಾ ಪರ್ವತಮುಖಿ, ಸುನಂದಾ, ಕುಸುಮಾ, ಹರೀಶ್ ಗುಂಡ್ಯ, ಕುಮಾರ ಗುಂಡ್ಯ, ಸತೀಶ್ ಗುಂಡ್ಯ, ಶಿವರಾಮ ಮಾನಾಡು, ಯೋಗೀಶ್ ನೂಚಿಲ ಸಹಕರಿಸಿದರು.

ಪ್ರಾಚಾರ್ಯ ಸೋಮಶೇಮಶೇಖರ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಉಪನ್ಯಾಸಕರಾದ ರತ್ನಾಕರ ಸುಬ್ರಹ್ಮಣ್ಯ, ಮನೋಜ್ ಕುಮಾರ್ ಬಿ.ಎಸ್, ಸಿಬ್ಬಂಧಿಗಳಾದ ಮೋಹನ್ ಮಠ, ಕೇಶವ ಆರ್ಯ, ಸವಿತಾ ಬಿಳಿನೆಲೆ ಸಹಕರಿಸಿದರು.
ಭಾರತ ಕೃಷಿ ಪ್ರಧಾನವಾದ ದೇಶ.ರೈತರು ದೇಶದ ಬೆನ್ನೆಲುಬು. ಆದರೆ ಇಂದು ಗದ್ದೆಗಳು ಮಾಯವಾಗಿದೆ. ಗದ್ದೆ ಬೇಸಾಯ ಮೂಲೆಗುಂಪಾಗುತ್ತಿದೆ. ಬೇಸಾಯದ ನೈಜ ಸಂತಸ ಹಾಗೂ ಆವಶ್ಯಕತೆಯ ಕುರಿತು ಯುವ ಪೀಳಿಗೆ ಜಾಗೃತರಾಗಬೇಕ ಎಂಬ ದೃಷ್ಠಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯರಾರ ಸೋಮಶೇಖರ ನಾಯಕ್.