ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್ ಎಸ್ ಪಿಯು ಕಾಲೇಜಿಗೆ ಗುರುವಾರ ರಾಜ್ಯ ಮುಜರಾಯಿ ಆಯುಕ್ತ ಎಚ್.ಬಸವರಾಜೇಂದ್ರ ಭೇಟಿ ನೀಡಿದರು. ಅವರಿಗೆ ಕಾಲೇಜಿನ ವಿದ್ಯಾರ್ಥಿಗಳು ಅದ್ದೂರಿ ಸ್ವಾಗತ ಕೋರಿದರು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1100 ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದ ಅಭಿವೃದ್ಧಿ ಶುಲ್ಕವನ್ನು ಕಡಿತಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ
ಸಹಕಾರ ಮಾಡಿದ ಆಯುಕ್ತರಿಗೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು.
ಕಾಲೇಜಿನ ಗೇಟ್ ನಿಂದ ಕಾಲೇಜಿನ ತನಕ ಇಕ್ಕೆಲದಲ್ಲಿ ಸಾಗಿ ನಿಂತು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ತನಗೆ ಹಾಕಿದ ಪುಷ್ಪಗಳನ್ನು ಕರದಲ್ಲಿ ಹಿಡಿದು ಮತ್ತೆ ವಿದ್ಯಾರ್ಥಿಗಳ ಮೇಲೆಯೇ ಪುಷ್ಪಗಳನ್ನು ಹಾಕಿದರು.ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಯುಕ್ತರಿಗೆ ಧನ್ಯವಾದ ಸಮರ್ಪಿಸಿದರು.
ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಅಭಿವೃದ್ಧಿ ಶುಲ್ಕ ವನ್ನು ಕಡಿತಗೊಳಿಸಿರುವುದರಿಂದ ಗ್ರಾಮೀಣ ಪ್ರದೇಶವಾದ ಈ ಭಾಗದ ಮಕ್ಕಳಿಗೆ ಹೆಚ್ಚಿನ ಅನುಕೂಲತೆ ಒದಗಿದೆ ಅನ್ನುವುದು ಸಂತಸಕರ. ಮುಂದಿನ ಅಂತಿಮ ಪರೀಕ್ಷೆಯಲ್ಲಿ 100℅ ಫಲಿತಾಂಶ ತರುವುದೇ ನನಗೆ ಕೊಡಬೇಕಾದ ಗಿಪ್ಟ್ ಎಂದರು.
ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಿದ ಮತ್ತು ಉಪನ್ಯಾಸಕರಿಗೆ ಶ್ರೀ ದೇವಳದಿಂದ ವೇತನ ಒದಗಿಸಿದ ಆಯುಕ್ತರಿಗೆ ಕಾಲೇಜಿನ ವತಿಯಿಂದ ಗೌರವಾರ್ಪಣೆ ಅರ್ಪಿಸಲಾಯಿತು..
ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್, ಮುಖ್ಯಗುರು ಕೆ.ಯಶವಂತ ರೈ ಸೇರಿದಂತೆ ಶ್ರೀ ದೇವಳದ ಸಿಬ್ಬಂದಿಗಳು ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.