ಸುಳ್ಯ:ಜಗತ್ತಿನ ಎಲ್ಲಾ ಆಗು ಹೋಗುಗಳಿಗೆ,ಎಲ್ಲಾ ಬದಲಾವಣೆಗಳಿಗೆ ಕನ್ನಡಿಯಾಗಿರುವ ಮಾಧ್ಯಮಗಳು ಮಾಹಿತಿ, ಜ್ಞಾನ ಮತ್ತು ಖುಷಿ ಕೊಡುತ್ತದೆ ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆದ
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಅತ್ಯಂತ ಸಂತಸದ
ವಿಷಯ. ಪತ್ರಕರ್ತರು ತಾಲೂಕಿನ ಅಭಿವೃದ್ಧಿಯ ಚಿಂತನೆಗಳನ್ನು ಹಂಚಿಕೊಳ್ಳಬೇಕು. ತಾಲೂಕಿನ ಅಭಿವೃದ್ಧಿ ಗೆ ಪತ್ರಕರ್ತರ ಸಹಕಾರ ಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಗುಜರಾತ್ನ ಉಧ್ಯಮಿ,ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ ನಾಯರ್ ಮಾತನಾಡಿ ‘ದೇಶದ ಅಭಿವೃದ್ಧಿ, ವಿಕಾಸವು ಗ್ರಾಮಗಳಿಂದ ಆರಂಭವಾಗಬೇಕು. ರಸ್ತೆ, ವಿದ್ಯುತ್, ಶಾಲೆಗಳ ಅಭಿವೃದ್ಧಿ ಸೇರಿ ಎಲ್ಲಾ ಮೂಲಭೂತ ಅಭಿವೃದ್ಧಿಗಳು ಆದಾಗ ಗ್ರಾಮಗಳು ಅಭಿವೃದ್ಧಿ ದಿಶೆಯಲ್ಲಿ ಮುನ್ನಡೆಯುತ್ತದೆ. ಗ್ರಾಮ ಅಭಿವೃದ್ಧಿ ಸಾಧ್ಯ ಆದರೆ ರಾಜ್ಯ,ದೇಶ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ವಿಕಾಸ ಎಂದರೆ ಅದು ಜನರಿಗೆ ಕಾಣಬೇಕು, ಅನುಭವ ಆಗಬೇಕು. ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ ಅಭಿವೃದ್ಧಿ ನಡೆಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಮಾತನಾಡಿ ಪತ್ರಕರ್ತರ ಸಂಘ 25 ವರ್ಷ ಆಚರಿಸುವ ಮೂಲಕ ಸಂಘದ ಎಲ್ಲಾ ಕಾರ್ಯಗಳ ಸಿಂವಾಹಲೋಕನಕ್ಕೆ ಪೂರಕ ಎಂದು ಹೇಳಿದರು. ಸಮಾಜದ ಅಭ್ಯುದಯಕ್ಕೆ ಪೂರಕವಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು. ಪತ್ರಿಕೆಗಳು ಸರಕಾರಗಳ ಕೆಲಸ ಸೇರಿದಂತೆ ಎಲ್ಲಾ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮಾತನಾಡಿ’ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಸುಳ್ಯದಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಹಲವು ದಶಕಗಳಿಂದ ಪತ್ರಕರ್ತರು ಬರೆಯುತ್ತಲೇ ಇದ್ದಾರೆ. ಇದೀಗ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಆರಂಭವಾಗಿದೆ. ಆದರೆ ಇದೀಗ ನಿಜವಾಗಿ ಸುಳ್ಯದ ಅಭಿವೃದ್ಧಿಗೆ 220 ಕೆವಿ ಸಬ್ ಸ್ಟೇಷನ್ ಬೇಕು. ನಾಡಿನ ಅಭಿವೃದ್ಧಿ ನಿರಂತರ. ಪತ್ರಕರ್ತರ ಪ್ರಯತ್ನವೂ ನಿರಂತರವಾಗಿದೆ ಎಂದು ಹೇಳಿದರು
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಕೆ.ಎಂ.ಸಿ ಆಸ್ಪತ್ರೆ ವತಿಯಿಂದ ಪತ್ರಕರ್ತರಿಗೆ ನೀಡುವ ಆರೋಗ್ಯ ಕಾರ್ಡ್ ಕುರಿತು ಮಾತನಾಡಿದರು.
ಶಾಸಕಿ ಭಾಗೀರಥಿ ಮುರುಳ್ಯ ಆರೋಗ್ಯ ಕಾರ್ಡ್ ವಿತರಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಜೆ.ಕೆ.ರೈ ಸ್ವಾಗತಿಸಿ, ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾಯರ್ಕೆರೆ ಪ್ರಸ್ತಾವಿಕವಾಗಿ ಮಾತನಾಡಿದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.