ವರದಿ:ಬಾಲಕೃಷ್ಣ ಕೊಯಿಲ.
ಕಾಣಿಯೂರು:ಅಡಿಕೆ ಎಲೆ ಚುಕ್ಕಿ ಹಾಗೂ ಹಳದಿ ರೋಗ ಬಾದೆಯ ಬಗ್ಗೆ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಜ್ಞಾನಿಗಳನ್ನೊಳಗೊಂಡ ಅಧ್ಯಯನ ಸಮಿತಿಯನ್ನು ರಚಿಸಿದ್ದು ಈ ಕರಿತು ಸಮಗ್ರ ಅಧ್ಯಯನ ನಡೆಸಿ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಗುರವಾರ ಮೂರು ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಬೈತಡ್ಕ-ಗುಜ್ಜರ್ಮೆ ರಸ್ತೆ ಉದ್ಘಾಟಿಸಿದ ಬಳಿಕ ಕಾಣಿಯೂರಿನಲ್ಲಿ
ಕಾಣಿಯೂರು ಗ್ರಾ.ಪಂಚಾಯಿತಿ ಸಭಾಭವನ ಕಟ್ಟಡ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಡಿಕೆಗೆ ಹಳದಿ ರೋಗ ಬಾದೆ ತೀವ್ರವಾಗಿ ಹರಡಿದೆ. ಅದರ ಬೆನ್ನಿಗೆ ಎಲೆಚುಕ್ಕಿ ರೋಗ ವ್ಯಾಪವಾಗುತ್ತಿದೆ, ಇದರಿಂದಾಗಿ ರೈತರು ಕಂಗಾಲಾಗಿದ್ದು, ಅದರ ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸಮಿತಿ ರಚನೆಯಾಗಿದೆ, ತೋಟಗಾರಿಕೆ, ಸಿಪಿಸಿಆರ್ಐ ಹಾಗೂ ಕೃಷಿಗೆ ಸಂಬಂಧಪಟ್ಟ ವಿಜ್ಞಾನಿಗಳ ತಂಡವನ್ನು ಮಾಡಿ ದೇಶದ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ರೋಗಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು. ಈ ಹಿಂದಿನ ಯುಪಿಎ ಸರಕಾರದ ಅಧಿಕಾರಿಯೊಬ್ಬರು ಅಡಿಕೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಇದೆ ಎಂದು ವರದಿ ನೀಡಿದ್ದರು. ಇದರ ಪರಿಣಾಮವಾಗಿ ಅಡಕೆ ಮೇಲೆ ನಿಷೇಧದ ತೂಗುಗತ್ತಿ ನೇತಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಡಿಕೆ ಹಾನಿಕಾರಕವಲ್ಲ ಎಂದು ಮನವರಿಗೆ ಮಾಡಿರುವುದಲ್ಲದೆ ಸರಕಾರ ಸುಪ್ರೀಂ ಕೋರ್ಟ್ಗೆ ಮನದಟ್ಟು ಮಾಡುವ ಕಾರ್ಯವನ್ನು ಮಾಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿದ್ದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಕೇಂದ್ರದಲ್ಲಿ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿಗೆ ವೇಗ ದೊರೆತಿದ್ದು ಗ್ರಾಮೀಣ ಭಾಗದ ಅನೇಕ ರಸ್ತೆಗಳಿಗೆ ಕಾಯಕಲ್ಪ ಆಗಿದೆ, ರಾಜ್ಯದಲ್ಲಿ ಆಡಳಿತವಿರುವ ಬಿಜೆಪಿ ಸರಕಾರ ಸುಳ್ಯ ವಿಧಾನ ಸಭಾ ಕೇತ್ರಕ್ಕೆ ಅತೀ ಹೆಚ್ಚು ಅನುದಾನ ನೀಡಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿದರು. ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ದರ್ಖಾಸು, ಪಿಡಿಒ ಎಂ.ದೆವರಾಜ್, ಸದಸ್ಯರಾದ ಪ್ರವೀಣ್ಚಂದ್ರ ರೈ ಕುಮೇರು, ವಿಶ್ವನಾಥ ಕೊಪ್ಪ, ದೇವಿಪ್ರಸಾದ್ ದೋಳ್ಪಾಡಿ, ಸುಲೋಚನಾ ಮಿಯ್ಯೊಳ್ಪೆ, ಮೀರಾ ಕಳೆಂಜೋಡಿ, ಗಂಗಮ್ಮ ಗುಜ್ಜರ್ಮೆ, ಅಂಬಾಕ್ಷಿ ಕೂರೇಲು, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಸುನಂದ ಅಬ್ಬಡ, ತಾರಾನಾಥ ಇಡ್ಯಡ್ಕ, ಲೋಕಯ್ಯ ಪರವ ದೋಲ್ಪಾಡಿ ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸದಸ್ಯ ರಾಮಣ್ಣ ಗೌಡ ಮುರಂಜ ವಂದಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಅಭಿವೃದ್ಧಿ ಉದ್ಘಾಟನೆ;
ರಾಜ್ಯ ಸರಕಾರದ ವಿಶೇಷ ಅನುದಾನ ಮೂರು ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಬೈತಡ್ಕ -ಗುಜ್ಜರ್ಮೆ ರಸ್ತೆಯ ಉದ್ಘಾಟನೆ.
೨೫ ಲಕ್ಷ ರೂ ವೆಚ್ಚದ ಗ್ರಾ.ಪಂ ಸಭಾ ಭವನ ಉದ್ಘಾಟನೆ.
ಗ್ರಾ.ಪಂ ಕಛೇರಿ ಎದುರು ೨.೫ ಲಕ್ಷ ರೂ ವೆಚ್ಚದಲ್ಲಿ ಹಾಸಲಾದ ಇಂಟರ್ ಲಾಕ್ ಉದ್ಘಾಟನೆ,ಗ್ರಾ,ಪಂ ಕಛೇರಿಗೆ ೨.೫ ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಸೋಲರ್ ವ್ಯವಸ್ಥೆಯ ಉದ್ಘಾಟನೆ. ಪಂ. ಕಟ್ಟಡದಲ್ಲಿ ಪ್ರಾರಂಭವಾದ ಜನೌಷಧಿ ಕೇಂದ್ರದ ಉದ್ಘಾಟನೆ,ಕಾರ್ಯಕ್ರಮದಲ್ಲಿ ಈ ಹಿಂದೆ ಕಾಣಿಯೂರು ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ. ಅಂತರಾಷ್ಟ್ರೀಯ ಕ್ರೀಡಾಪಟು ದೀಕ್ಷಾ ಕುಕ್ಕುನಡ್ಕ ಹಾಗೂ ಯೋಗ ಪ್ರತಿಭೆ ಪ್ರಣಮ್ಯಾ ಅವರಿಗೆ ಸನ್ಮಾನ.ಗುತ್ತಿಗೆದಾರರಾದ ಜಲೀಲ್ ಬೈತಡ್ಕ, ಹಸೈನರ್ ಹಾಗೂ ಇಂಜೀನಿಯರ್ ಹರೀಶ್ ಅವರಿಗೆ ಗೌರವಾರ್ಪಣೆ ನಡೆಯಿತು.