ಸುಳ್ಯ: ಹೃದಯವಂತಿಕೆ ಇದ್ದವರು ಮಾತ್ರ ಇನ್ನೊಬ್ಬರ ಕಷ್ಟಕ್ಕೆ ಮರುಗುತ್ತಾರೆ, ನೋವಿಗೆ ಸ್ಪಂದಿಸುತ್ತಾರೆ, ಸೇವಾ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಎಂ.ಬಿ.ಸದಾಶಿವ ಮತ್ತು ಹರಿಣಿ ಸದಾಶಿವ ಅವರು ತಮ್ಮ ಅಪಾರ ಹೃದಯ ಶ್ರೀಮಂತಿಕೆ ಮತ್ತು ಸೇವಾ ಮನೋಭಾವದಿಂದ ವಿಶೇಷ ಮಕ್ಕಳ ಶಾಲೆ ಸ್ಥಾಪಿಸಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದ ಎಂ.ಬಿ. ಫೌಂಡೇಶನ್ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆಸುವ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡದ

ಉದ್ಘಾಟನೆ ನೆರವೇರಿಸಿ, ಯುವಜನ ಸಂಯುಕ್ತ ಮಂಡಳಿ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಂದೀಪ್ ವಿಶೇಷ ಶಾಲೆಗೆ ಸಾಧ್ಯವಾಗುವ ಎಲ್ಲಾ ನೆರವು, ಸಹಾಯ ನೀಡಲಾಗುವುದು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಮಂಜುನಾಥ ಭಂಡಾರಿ ಮಾತನಾಡಿ ಎಂ.ಬಿ.ಫೌಂಡೇಶನ್ ಮೂಲಕ ಎಂ.ಬಿ.ಸದಾಶಿವ ಹಾಗು ತಂಡದ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಎಂ.ಬಿ.ಜಯರಾಮ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಜರ್ಮನಿಯ ಕ್ಯಾರೋಲಿನಾ ಸೀಡೆಲ್ ಹಾಗು ಕ್ರಿಸ್ಟಿ ದಂಪತಿಗಳು, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ಪಮೆಲಾ ಸಂದೀಪ್, ಅತಿಥಿಗಳಾಗಿದ್ದರು.

ಎಂ.ಬಿ. ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಜಿ ಪುಷ್ಪಾ ರಾಧಾಕೃಷ್ಣ ವಂದಿಸಿದರು.ಸುಸ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ, ಎಂ.ಬಿ.ಫೌಂಡೇಶನ್ ಸಲಹಾ ಸಮಿತಿ ಸದಸ್ಯರಾದ ಎನ್.ಜಯಪ್ರಕಾಶ್ ರೈ, ಕೆ.ಸಿ.ಕರುಂಬಯ್ಯ, ಎಂ.ಬಿ.ಫೌಂಡೇಷನ್ ಕಾರ್ಯದರ್ಶಿ ಡಾ.ಸವಿತಾ ಲಕ್ಷ್ಮಿ, ಟ್ರಸ್ಟಿಗಳಾದ ಎಂ.ಎಸ್.ನಿಹಾಲ್, ಶರೀಫ್ ಜಟ್ಟಿಪಳ್ಳ, ಪುಷ್ಪಜಯರಾಮ ಉಪಸ್ಥಿತರಿದ್ದರು.

ಶಾಲಾ ಭೋಜನ ಶಾಲೆ, ಶಾಲಾ ಕೊಠಡಿಗಳು, ವೃತ್ತಿ ಶಿಕ್ಷಣ ಕೇಂದ್ರ, ಫಿಸಿಯೋ ತೆರಫಿ ಕೊಠಡಿ,ನಾಯಕತ್ವ ತರಬೇತಿ ಕೇಂದ್ರ, ವೈದ್ಯಕೀಯ ತಪಾಸಣಾ ಕೊಠಡಿ, ಕಚೇರಿ ಕೊಠಡಿಯನ್ನು ಅತಿಥಿಗಳು ಉದ್ಘಾಟಿಸಿದರು. ವಿಶೇಷ ಸಾಧನೆ ಮಾಡಿದ ಮಕ್ಕಳನ್ನು, ವಿವಿಧ ಕ್ಷೇತ್ರದ ಸಾಧಕರನ್ನು, ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಬಳಿಕ ವೈವಿಧ್ಯ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ಶಾಲಾ ಸ್ಮರಣ ಸಂಚಿಕೆಯನ್ನು ಬಿ.ಎಂ.ಫಾರೂಕ್ ಬಿಡುಗಡೆ ಮಾಡಿದರು.

