ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ರಾಜಸ್ವ ಧನ ಇಳಿಕೆ ಮತ್ತು ಸರಳ ಮರಳು ನೀತಿ ನಿಯಮಾವಳಿಯನ್ನು ಸರ್ಕಾರ ಈಗಾಗಲೇ ರಚಿಸಿದ್ದು, ಸಚಿವ ಸಂಪುಟದಿಂದ ಒಪ್ಪಿಗೆಯೂ ಸಿಕಿದೆ. ಶೀಘ್ರದಲ್ಲೇ ಗೆಜೆಟ್ ನೋಟಿಫಿಕೇಶನ್ ನಡೆಯಲಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಹೇಳಿದೆ.ರಾಯಲ್ಟಿ ಇಳಿಸಬೇಕು ಎನ್ನುವುದು ಕೆಂಪು ಕಲ್ಲು ತೆಗೆಯುವವರ
ಪ್ರಮುಖ ಬೇಡಿಕೆಯಾಗಿದ್ದು, ಅದರಂತೆ ಕೆಂಪುಕಲ್ಲು ಹೊಸ ನಿಯಮಾವಳಿಗೆ ಸಂಬಂಧಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಜಿಲ್ಲಾ ಕಾಂಗ್ರೆಸ್ ಮುಖಂಡರು ಈಗಾಗಲೇ ಈ ಬಗ್ಗೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜಸ್ವ ಇಳಿಕೆ ಮಾಡುವುದು ಹಾಗೂ ಪರವಾನಗಿ ನೀಡುವ ವಿಧಾನವನ್ನು ಸರಳೀಕರಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಹಿಂದೆ ಇದ್ದ 5 ಲೈಸೆನ್ಸ್ ಬದಲಿಗೆ ಈಗಾಗಲೇ 25 ಲೈಸೆನ್ಸ್ಗಳನ್ನು ನೀಡಲಾಗಿದೆ. ಶೀಘ್ರದಲ್ಲಿ ಸರಳೀಕೃತ ನಿಯಮದೊಂದಿಗೆ ಮರಳು ಮತ್ತು ಕೆಂಪು ಕಲ್ಲು ಅಭಾವಕ್ಕೆ ಮುಕ್ತಿ ಸಿಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಮತ್ತು ಮುಖಂಡರಾದ ಪದ್ಮರಾಜ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





