*ಚಂದ್ರಾವತಿ ಬಡ್ಡಡ್ಕ.
ಈ ವಾರದಲ್ಲಿ ಜನರ ಕುತೂಹಲ ಕೆರಳಿಸಿದ್ದು ಬಿಜೆಪಿ ಪಟ್ಟಿ ಬಿಡುಗಡೆ. ಇಂದು ನಾಳೆ ಈಗ ಮತ್ತೆ ಎನ್ನುತ್ತಾ ಜನರು ಕಾಯುತ್ತಿದ್ದದ್ದು ನೋಡಿದರೆ ಚುನಾವಣಾ ಫಲಿತಾಂಶಕ್ಕೆ ಕಾದದ್ದಕ್ಕಿಂತಲೂ ಒಂದು ಮುಟಿಗೆ ಹೆಚ್ಚೇ ಇತ್ತು. ಪಟ್ಟಿ ಸಿದ್ಧವಾಗುತ್ತಿರುವಾಗಲೇ ಸೂಕ್ಷ್ಮವರಿತ ಕೆಲವು ಹಿರಿಯ ನಾಯಕರು ತಮಗೆ ಟಿಕೆಟ್ ಬೇಡವೆಂದು ನಿವೃತ್ತಿ ಘೋಷಿಸುವ ಔದಾರ್ಯತೋರಿದರು. ಪಟ್ಟಿ ಬಹಿರಂಗವಾಗುತ್ತಿದ್ದಂತೆ ಕೆಲವರು ನಕ್ಕರು, ಕೆಲವರು ಅತ್ತರು, ಹಲವರು ಮುನಿದರು. ಒಟ್ಟು 52 ಹೊಸಮುಖಗಳು
ನಂದಕುಮಾರ್
ಸ್ಫರ್ಧೆಗೆ ಇಳಿಯುತ್ತಿವೆ. ಈ ಮಧ್ಯೆ ಕನಕಪುರ, ವರುಣಾದಂತಹ ಕ್ಷೇತ್ರಗಳಲ್ಲಿ ದೊಡ್ಡತಲೆಗಳ ಎದುರು ದೊಡ್ಡತಲೆಗಳನ್ನೇ ಕಣಕ್ಕಿಳಿಸಿದ್ದರೂ ಅದೇನೂ ಅಂತ ಸ್ವಾರಸ್ಯಕರವಾಗಿಲ್ಲ. ಎಲ್ಲರೂ ಎರಡೆರಡು ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವ ಕಾರಣ ಒಂದಿಲ್ಲದಿದ್ದರೆ ಒಂದು ಗ್ಯಾರಂಟಿ.
ಇತ್ತ ನಮ್ಮ ಸುಳ್ಯ ಕ್ಷೇತ್ರದಲ್ಲಿ ದಿನೇ ದಿನೇ ರಾಜಕೀಯ ಸ್ಥಿತಿಗತಿಗಳು ಹೆಚ್ಚಿನ ವೋಲ್ಟೇಜ್ ಪಡೆದುಕೊಳ್ಳುತ್ತಿವೆ.ಒಂದೆಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಭ್ರಮನಿರಸನಗೊಂಡಿರುವ ನಂದಕುಮಾರ್ ಬೆಂಬಲಿಗರು ತಮ್ಮ ನಾಯಕನನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಶಕ್ತಿಪ್ರದರ್ಶನಕ್ಕೆ ತೀರ್ಮಾನಿಸಿದ್ದಾರೆ. ಇನ್ನೊಂದೆಡೆ ಬಿಜೆಪಿಯಿಂದ ಆರು
ಬಾರಿ ಸುಳ್ಯಕ್ಷೇತ್ರವನ್ನು ಪ್ರತಿನಿಧಿಸಿ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಸಚಿವನೆಂಬ ಇತಿಹಾಸ ಬರೆದಿರುವ ಅಂಗಾರರು ಟಿಕೆಟ್ ವಂಚಿತರಾಗಿ ಮುನಿಸಿಕೊಂಡಿದ್ದಾರೆ. ಹೊಸಮುಖ ಬೇಕೆಂಬ ಜನರ ಬೇಡಿಕೆಗೆ ಮಣೆಹಾಕಿರುವ ಬಿಜೆಪಿ ಪಕ್ಷವು ತನ್ನನ್ನು ಕಡೆಗಣಿಸಿದ್ದು 30 ವರ್ಷಗಳ ಕಾಲ ಸುಳ್ಯಕ್ಕೆ ಅನಭಿಶಕ್ತರಾಗಿದ್ದ ಶಾಸಕರಿಗೆ ನೋವು ನೀಡಿದ್ದು, ಪಕ್ಷವು ಕೊನೆಯಲ್ಲಿ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಹೇಳಿದ್ದಾರೆ. ತಾನು ಎಂದೆಂದಿಗೂ ಪಕ್ಷದ ತತ್ವಸಿದ್ಧಾಂತಕ್ಕೆ ಬದ್ಧನೆಂದು ಹೇಳಿಕೊಂಡೇ ಬಂದಿದ್ದು, ಪಕ್ಷ ಹಾಕಿದ ಗೆರೆಯನ್ನು ದಾಟದೆ, ತಮಗೆ ಸಚಿವ ಪಟ್ಟ ತಪ್ಪಿದ್ದಾಗಲೂ ಅಷ್ಟೊಂದು ಬೇಸರ ವ್ಯಕ್ತಪಡಿಸದ ಅಂಗಾರರು ಇದೀಗ ನೊಂದುಕೊಂಡಿದ್ದಾರೆ. ಟಿಕೆಟ್ ಒಲಿದಿರುವ ಭಾಗೀರಥಿ ಮುರುಳ್ಯ ಅವರು ಕ್ಷೇತ್ರದ ಉತ್ತರಾಧಿಕಾರಿಯಾಗುವ ನಿಟ್ಟಿನಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಆಮ್ ಆದ್ಮಿ ಪಕ್ಷ ಸುಮನಾ ಬೆಳ್ಳಾರ್ಕಾರ್ ಎಂಬ ಎಂಬಿಎ ಪದವೀಧರೆ ಮಹಿಳೆಯನ್ನು ಕಣಕ್ಕಿಳಿಸಿದೆ. ಅವರು ಈಗಾಗಲೇ ಕ್ಷೇತ್ರದಲ್ಲಿ ಅತ್ಯುತ್ಸಾಹದಿಂದ ಸಂಚರಿಸುತ್ತಿದ್ದಾರೆ. ಬಿಜೆಪಿಯಿಂದಲೂ ಮಹಿಳಾ ಅಭ್ಯರ್ಥಿ. ಈ ಸರ್ತಿ ಸುಳ್ಯಕ್ಕೊಬ್ಬರು ಪ್ರಥಮ ಮಹಿಳಾ ಶಾಸಕಿ ದೊರಕುವರೇ?
ಭಾಗೀರಥಿ, ಸುಮನಾ
ಇನ್ನೇನು ಕೆಲವೇ ದಿನಗಳಲ್ಲಿ ನಾಮಪತ್ರ ಸಲ್ಲಿಕೆ, ಹಿಂತೆಗೆಯುವಿಕೆ, ಅಂತಿಮಗೊಳಿಸುವಿಕೆ ನಡೆಯಲಿದ್ದು, ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಹಾಗೂ ಕ್ಷೇತ್ರದಲ್ಲಿನ ಸ್ಫರ್ಧೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಆಮೇಲಿನದ್ದು ಹೋರಾಟ ಪರ್ವ.
ಜಿ.ಕೃಷ್ಣಪ್ಪ
ಓಟಾ? ನೋಟಾ?.. ಕಳೆದ ಬಾರಿ ನಾಲ್ಕನೇ ಸ್ಥಾನ ಪಡೆದಿದ್ದ ನೋಟಾ..:
ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಧಾನ ಪಕ್ಷಗಳೆರಡೂ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಬಗ್ಗೆ ಪಕ್ಷದ ತಳಮಟ್ಟದ ಕೆಲವು ಕಾರ್ಯಕರ್ತರಿಗೆ ಅಷ್ಟೊಂದು ಹಿತವಿಲ್ಲ. ಅಸಮಾಧಾನದ ಹೊಗೆ ದಟ್ಟವಾಗಿಯೇ ಎದ್ದಿದೆ. ಪಕ್ಷನಿಷ್ಠರು ಯಾರೇ ಅಭ್ಯರ್ಥಿಯಾದರೂ ಅಭ್ಯಂತರ ಇಲ್ಲದವರು. ಆದರೆ ವ್ಯಕ್ತಿನಿಷ್ಠ ಕಾರ್ಯಕರ್ತರು ಭ್ರಮನಿರಸನಗೊಂಡು ಸದ್ಯದ ಮಟ್ಟಿಗೆ ಓಟಾ? – ನೋಟಾ (NOTA)? ಎಂಬ ಗೊಂದಲದಲ್ಲಿದ್ದಾರೆ. ಮತದಾರರ ಕೊನೆಯ ಕ್ಷಣದ ನಾಡಿಮಿಡಿತವೇನೆಂಬುದು ಮೀನಿನ ಹೆಜ್ಜೆಯಂತೆ.
ಈ ಮಧ್ಯೆ ತಮ್ಮತಮ್ಮ ಊರುಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲವೆಂದು ಮುನಿದಿರುವ ಮತದಾರರೂ ಸಹ ಓಟಿಗಿಂತ ನೋಟಾದ ಜಪ ಮಾಡುತ್ತಿದ್ದಾರೆ. ನಮ್ಮಲ್ಲಿ ಘಟ್ಟದ ಮೇಲಿನ ಕ್ಷೇತ್ರಗಳಂತೆ “ಓಟಿಗಾಗಿ ನೋಟು ಅಥವಾ ನೋಟಿಗಾಗಿ ಓಟು” ಕಾರುಬಾರು ಇಲ್ಲ ಎನ್ನಬಹುದು. ಆದರೆ ಯಾರು ಗೆದ್ದರೂ ಬರ್ಕತ್ತಿಲ್ಲ ನಮಗೊಂದು ಸಂಕಕ್ಕೂ ಗತಿ ಇಲ್ಲ ಎಂಬ ವರ್ಗದವರು ನೋಟಾದತ್ತ ವಾಲುತ್ತಾರಾ? ಹಾಗಾದರೆ ಏನಿದು ನೋಟಾ?
ನೋಟಾ (NOTA) ಅಂದರೆ None of the above ಅಂತ ಅರ್ಥ. ಈ ಮೇಲಿನವರಲ್ಲಿ ಯಾರೂ ತನ್ನ ಆಯ್ಕೆ ಅಲ್ಲ ಅಂತ ಮತದಾರ ತನ್ನ ಮತದಾನದ ವೇಳೆ ಸೂಚಿಸುವ ಒಂದು ಆಯ್ಕೆಯೇ ನೋಟಾ. ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳ ಪಟ್ಟಿಯ ಕೊನೆಯಲ್ಲಿ ಈ NOTA ಆಯ್ಕೆ ಇರುತ್ತದೆ. ಮತದಾರನೊಬ್ಬನಿಗೆ ಚುನಾವಣೆಯಲ್ಲಿ ಸ್ಫರ್ಧಿಸಿದ ಯಾವುದೇ ವ್ಯಕ್ತಿಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದಲ್ಲಿ, ಅಥವಾ ಆತ ಅಭ್ಯರ್ಥಿಗಳಾರು ಆಯ್ಕೆಗೆ ಸೂಕ್ತವಲ್ಲ ಎಂದು ಪರಿಗಣಿಸಿದರೆ ಆತ/ಆಕೆ ನೋಟಾಗೆ ತನ್ನ ಮತ ಒತ್ತಬಹುದಾಗಿದೆ.
ಅಮೆರಿಕದಲ್ಲಿ ಈ ವ್ಯವಸ್ಥೆ 1976 ರಲ್ಲಿಯೇ ಜಾರಿಯಲ್ಲಿತ್ತು. ಸೋವಿಯತ್ ಒಕ್ಕೂಟದಲ್ಲಿ 1990ರ ಚುನಾವಣೆಯಲ್ಲಿ ಈ ನನ್ ಆಫ್ ದಿ ಎಬವ್, 200 ಹೊಸ ಅಭ್ಯರ್ಥಿಗಳೊಂದಿಗೆ ಹೊಸ ಚುನಾವಣೆ ನಡೆಸಲು ಮತ್ತು ಸೋವಿಯತ್ ಒಕ್ಕೂಟವನ್ನು ವಿಸರ್ಜಿಸಲು ಹಾದಿಯಾಗಿತ್ತು. ಕೊಲಂಬಿಯಾ, ಸ್ಪೇನ್, ಇಂಡೋನೇಶಿಯಾ, ಇಂಗ್ಲೆಂಡ್, ಕೆನಡಾ, ನಾರ್ವೆ, ಸರ್ಬಿಯಾ ಹಾಗೂ ಮತ್ತಿತರ ರಾಷ್ಟ್ರಗಳಲ್ಲಿ ಈ ಆಯ್ಕೆ ಇದೆ.
ಭಾರತದಲ್ಲಿ ನೋಟಾ ಚಲಾಯಿಸಲು 2009 ರ ಚುನಾವಣೆಯಿಂದಲೇ ಅವಕಾಶವಿತ್ತು. ಆದರೆ ಗೌಪ್ಯತೆಯ ಕೊರತೆ ಇತ್ತು. ಪ್ರಜಾ ಪ್ರತಿನಿಧಿ ಕಾಯ್ದೆಯ ಚುನಾವಣಾ ನಿಯಮಗಳ ಸಂಹಿತೆ 1961ರ ಸೆಕ್ಷನ್ 49 – O ಪ್ರಕಾರ ಯಾವುದೇ ಮತದಾರ, ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಹಾಕಲು ನಿರಾಕರಿಸಿದಲ್ಲಿ ಅಂತಹ ಮತದಾನದ ವೇಳೆ ಪ್ರಿಸೈಡಿಂಗ್ ಆಫೀಸರ್ ಒಂದು ಟಿಪ್ಪಣಿ ಮಾಡಬೇಕಿತ್ತು ಮತ್ತು ಇದಕ್ಕೆ ಮತದಾರ ತನ್ನ ಸಹಿ ಅಥವಾ ಹೆಬ್ಬೆಟ್ಟು ಒತ್ತಬೇಕಿತ್ತು. ಆಗ ಬ್ಯಾಲೆಟ್ನಲ್ಲಿ ಈ ಆಯ್ಕೆಯನ್ನು ಸೇರಿಸಿರಲಿಲ್ಲ ಮತ್ತು ಪ್ರತ್ಯೇಕವಾಗಿ ಸೂಚಿಸಬೇಕಿತ್ತು.
ನಂತರದಲ್ಲಿ 2013ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ರಿಟ್ ಪಿಟಿಷನ್ ಒಂದರ ಕುರಿತು ತೀರ್ಪು ನೀಡುವ ವೇಳೆ ನೋಟಾ ಆಯ್ಕೆಯನ್ನು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸೇರಿಸುವಂತೆ ನಿರ್ದೇಶನ ನೀಡಿತು. ಹಾಗಾಗಿ 2013ರಲ್ಲಿ ಛತ್ತೀಸ್ಘಡ, ಮಿಜೋರಾಂ, ರಾಜಸ್ಥಾನ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಹಾಗೂ ದೆಹಲಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ನಡೆದಾಗ ಈ ಆಯ್ಕೆಯನ್ನು ಮೊದಲಾಗಿ ಬಳಸಲಾಗಿತ್ತು. 2015ರಲ್ಲಿ ನೋಟಾಗಾಗಿಯೇ ಕಪ್ಪು ಅಡ್ಡಗೆರೆಗಳಿರುವ ನಿರ್ದಿಷ್ಟ ಚಿಹ್ನೆಯನ್ನು ವಿನ್ಯಾಸಗೊಳಿಸಲಾಗಿದೆ.
ಜನರಿಗೆ ತಮ್ಮ ಅಸಮಾಧಾನವನ್ನು ಹೊರಹಾಕಲು ಇದೊಂದು ಮಾರ್ಗ ಅಷ್ಟೆ ಬಿಟ್ಟರೆ ಇದರಿಂದ ಅಂತಹ ಪ್ರಯೋಜನವೇನೂ ಇಲ್ಲ. ನೋಟಾಗೆ ಹಾಕಿದ ಓಟು ವ್ಯರ್ಥ. ಮತ್ತು ಅಭ್ಯರ್ಥಿಗಳಿಗಿಂತ ನೋಟಾವೇ ಮೇಲುಗೈ ಸಾಧಿಸಿದರೂ ಅಭ್ಯರ್ಥಿಗಳೆಲ್ಲರೂ ಅನರ್ಹರಾಗುವುದಿಲ್ಲ. ಹೆಚ್ಚು ಓಟುಗಳಿಸಿದ ಅಭ್ಯರ್ಥಿಗೆ ಗೆಲುವಿನ ಚುಕ್ಕಾಣಿ ಲಭಿಸುತ್ತದೆ. ಅಧಿಕ ಸಂಖ್ಯೆಯಲ್ಲಿ ನೋಟಾ ಚಲಾವಣೆಯಾದರೂ ಅದರ ಆಧಾರದಲ್ಲಿ ಅಭ್ಯರ್ಥಿಗಳ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ.
ಮತಚಲಾಯಿಸುವ ಆಸಕ್ತಿ ಇದ್ದು ಮತದಾರ ಯಾವುದೇ ಆಭ್ಯರ್ಥಿಯು ಸೂಕ್ತವೆಂದು ಪರಿಗಣಿಸದಿದ್ದರೆ ಅಂತವರಿಗೆ ತಮ್ಮ ಹಕ್ಕು ಚಲಾವಣೆಗೆ ನೋಟಾ ಒಂದು ಆಯ್ಕೆ. ಮತ್ತು ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಇದು ಕಾರಣವಾದೀತು. ಆದರೆ ಗೆಲುವಿನ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ನೋಟಾಕ್ಕಿದೆ. ಉದಾಹರಣೆಗೆ ಒಬ್ಬ ಅಭ್ಯರ್ಥಿ ಕನಿಷ್ಠ ಮತಗಳ ಅಂದರೆ ನೂರೋ ಇನ್ನೂರೋ ಮತಗಳ ಅಂತರದಿಂದ ಸೋತರೆ, ಆ ಅಭ್ಯರ್ಥಿಗೆ ಬೀಳಬೇಕಿದ್ದ ಮತಗಳು ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ನೋಟಾಗೆ ಬಿದ್ದರೆ ಫಲಿತಾಂಶ ತಲೆಕೆಳಗಾಗಬಲ್ಲದು.
ನಮ್ಮ ಸುಳ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 1310 ನೋಟಾ ಓಟುಗಳು ಬಿದ್ದಿದ್ದವು. ಅಂದರೆ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 0.78 ಪ್ರತಿಶತ ಮತಗಳು. ಈ ಸರ್ತಿಯೂ ಅಸಮಾಧಾನದ ಕಾವು ಜೋರಿದೆ. ನೋಟಾದ ಅರಿವು ಹೆಚ್ಚಿದೆ. ಕೆಲವು ಕಡೆ ಮತ ಬಹಿಷ್ಕಾರದ ಬ್ಯಾನರ್ಗಳು ರಾರಾಜಿಸಿದ್ದವು. ಇಂತಹ ಅಸಮಾಧಾನಗಳೆಲ್ಲ ನೋಟಾವಾಗಿ ಪರಿವರ್ತನೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಅದೇನೇ ಇದ್ದರೂ ಈ ಬಾರಿ ಸುಳ್ಯಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರಣವಂತು ನಿಚ್ಛಳವಾಗಿದೆ.
ಚಂದ್ರಾವತಿ ಬಡ್ಡಡ್ಕ
(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)