ಸುಳ್ಯ;ಕಳೆದ ಎರಡು ವರ್ಷಗಳಿಂದ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬರುತ್ತಿದ್ದರೆ, ರಾಜ್ಯ ಸರಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಸಿ ಜನರ ಜೇಬಿಗೆ ಕನ್ನ ಹಾಕುತಿದೆ. ಇಂಧನ ದರ ಏರಿಸಿದ ರಾಜ್ಯ ಸರಕಾರದ ಕ್ರಮವನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ. ದರ ಏರಿಕೆಯನ್ನು
ತಕ್ಷಣ ಹಿಂಪಡೆಯಬೇಕು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಆಗ್ರಹಿಸಿದ್ದಾರೆ. ತೆರಿಗೆ ಹೆಚ್ಚಳ ಮಾಡಿ ಡೀಸೆಲ್ಗೆ 3.50 ಪೆಟ್ರೋಲ್ಗೆ 3ರೂ ಏರಿಸಿ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಕಾಂಗ್ರೆಸ್ ಗ್ಯಾರಂಟಿಯೇ ಎಂದು ಪ್ರಶ್ನಿಸಿದ ಅವರು ಸರಕಾರದ ಜನ ವಿರೋಧಿ ನೀತಿಯಿಂದ ಸಾಮಾನ್ಯ ಜನರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಹಕಾರಿ ಸಂಘಗಳ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗುವುದು ಎಂದು
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಈಡೆರಿಸಿಲ್ಲ. ಹಾಲಿನ ಸಹಾಯ ಧನ ಲೀಟರ್ಗೆ ರೂ 5 ಇನ್ನೂ ಯಾರಿಗೂ ನೀಡುತ್ತಿಲ್ಲ. ರೆಜಿಸ್ಟ್ರೇಷನ್ ಫೀಸ್ ದುಪ್ಪಟ್ಟು, ಛಫಾ ಕಾಗದದ ದರ ಮೂರು ಪಟ್ಟು ಹೆಚ್ಚಳ ಮಾಡಿ ಜನರಿಗೆ ಮೋಸ ಮಾಡಿದೆ ಎಂದು ವೆಂಕಟ್ ವಳಲಂಬೆ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.









