ಮಂಗಳೂರು:ಸಂಸದ್ ಖೇಲ್ ಮಹೋತ್ಸವ ಪ್ರಯುಕ್ತ ಮಂಗಳೂರಿನ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ “ನಮೋ ಚೆಸ್ ಟೂರ್ನಮೆಂಟ್”ನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಉದ್ಘಾಟಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ನಡೆದ
ಈ ಈ ಚೆಸ್ ಟೂರ್ನಿಯಲ್ಲಿ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೋ ನಾಯಕ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಇದೇವೇಳೆ ಸಂಸದ ಕ್ಯಾ. ಚೌಟ ಅವರೊಂದಿಗೆ ಸಾಂಕೇತಿಕವಾಗಿ ಚೆಸ್ ಆಟವಾಡಿ ಗಮನಸೆಳೆದರು. ಈ ನಮೋ ಚೆಸ್ ಟೂರ್ನ ಮೆಂಟ್ ನಲ್ಲಿ 10ವರ್ಷದೊಳಗಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಒಟ್ಟು ಮೂರು ವಿಭಾಗಗಳಲ್ಲಿ ಚೆಸ್ ಮ್ಯಾಚ್ಗಳು ನಡೆದವು. 10 ವರ್ಷದೊಳಗಿನ ಸಬ್ ಜ್ಯೂನಿಯರ್, 15 ವರ್ಷದೊಳಗಿನ ಜ್ಯೂನಿಯರ್ ಹಾಗೂ ಓಪನ್ ಕೆಟಗರಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಸುಮಾರು 500ಕ್ಕೂ ಮಂದಿ ಭಾಗವಹಿಸಿದರು.
ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಸ್ಪರ್ಧಾಳುಗಳಿಗೆ ಶುಭ ಕೋರಿದರು.ಟೂರ್ನಿ ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಂಸದ್ ಕ್ರೀಡಾ ಮಹೋತ್ಸವದ ಪ್ರಯುಕ್ತ ಈ ನಮೋ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಇನ್ನು ಪ್ರತಿ ವಾರವು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ವಾಲಿಬಾಲ್, ತ್ರೋಬಾಲ್, ಕುಸ್ತಿ, ಕಬ್ಬಡ್ಡಿ, ಹಗ್ಗ-ಜಗ್ಗಾಟ, ಕ್ರಿಕೆಟ್, ಬ್ಯಾಡ್ಮಿಂಟನ್ ಪಂದ್ಯಾಟ ಆಯೋಜಿಸಲಾಗುತ್ತಿದೆ ಎಂದರು. ಶಾಸಕ ವೇದವ್ಯಾಸ್ ಕಾಮತ್, ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸುನೀಲ್ ಅಚಾರ್, ಜಿಲ್ಲಾಧ್ಯಕ್ಷ ಅಮರಶ್ರೀ ಶೆಟ್ಟಿ ಭಾಗವಹಿಸಿದ್ದರು.













