ಮೈಸೂರು: ನಾಡಹಬ್ಬ ದಸರಾಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಚಾಲನೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ಬೆಳಗ್ಗೆ 10.15 ರಿಂದ 10.36ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡುವ ಮೂಲಕ ಹಂಸಲೇಖ ದಂಪತಿ ದಸರಾ ಹಬ್ಬಕ್ಕೆ ಚಾಲನೆ ಕೊಟ್ಟರು. ಬೆಳ್ಳಿಯ ರಥದಲ್ಲಿ ಪ್ರತಿಷ್ಠಾಪಿಸಿದ್ದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ
ಪುಷ್ಪಾರ್ಚನೆಗೈಯ್ಯುವ ಮೂಲಕ ಈ ಬಾರಿಯ ವೈಭವದ ದಸರಾ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ ಸಿಕ್ಕಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಮುನಿಯಪ್ಪ, ವೆಂಕಟೇಶ್, ಕೆ.ಜೆ.ಜಾರ್ಜ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಶಾಸಕರಾದ ಜಿ.ಟಿ. ದೇವೇಗೌಡ. ಜಿ. ಡಿ. ಹರೀಶ್ ಗೌಡ, ಅನಿಲ್ ಚಿಕ್ಕಮಾದು, ರವಿಶಂಕರ್, ಎ ಆರ್ ಕೃಷ್ಣಮೂರ್ತಿ ಸೇರಿ ಹಲವು ಗಣ್ಯರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ದಸರಾ ಕಾರ್ಯಕ್ರಮಗಳು ಇಂದಿನಿಂದ ಅ.24ರವರೆಗೆ ನಡೆಯಲಿವೆ. ತಾಯಿ ಚಾಮುಂಡೇಶ್ವರಿ ಪೂಜೆಯೊಂದಿಗೆ ಆರಂಭವಾಗುವ ದಸರಾ ಆಚರಣೆಯು ಜಂಬೂಸವಾರಿಯ ವೈಭವದ ಮೆರವಣಿಗೆ, ಪಂಜಿನ ಕವಾಯತಿನ ರೋಮಾಂಚನ ಸಾಹಸಗಳೊಂದಿಗೆ ಸಂಪನ್ನಗೊಳ್ಳುತ್ತದೆ. ಮುಂದಿನ 10 ದಿನಗಳ ಕಾಲ ಸಾಂಸ್ಕೃತಿಕ ನಗರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.