ಸುಳ್ಯ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ
ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನಾಚರಣೆಯ ಅಂಗವಾಗಿ 10ನೇ ವರುಷದ ಸುಳ್ಯ ಮೊಸರು ಕುಡಿಕೆ ಉತ್ಸವ ವು ಸೆ. 16 ರಂದು ಸುಳ್ಯದಲ್ಲಿ ನಡೆಯಲಿದೆ ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೊಸರು ಕುಡಿಕೆ ಉತ್ಸವದ
ಶೋಭಾಯಾತ್ರೆ ಅಪರಾಹ್ನ 2 ಗಂಟೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಹೊರಡಲಿದೆ.
ಸಂಜೆ ಗಂಟೆ 6ರಿಂದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭೆಯು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಖ್ಯಾತ ವಾಗ್ಮಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸತ್ಸಂಗ ಪ್ರಮುಖ್ ಸೂರ್ಯನಾರಾಯಣ ಭಟ್ ಕಶೆಕೋಡಿಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಸ್ವದೇಶಿ ಗೋ ಸಂರಕ್ಷಕ ಕೆ. ವಿಶ್ವನಾಥ ಪೈ ಐವರ್ನಾಡು, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಉಪಸ್ಥಿತರಿರುವರು ಎಂದು ಬಜರಂಗದಳ ಸಂಯೋಜಕ್ ಹರಿಪ್ರಸಾದ್ ಎಲಿಮಲೆ ಕಾರ್ಯಕ್ರಮದ ವಿವರ ನೀಡಿದರು.
ಚೆನ್ನಕೇಶವ ದೇವಸ್ಥಾನದ ಮುಂಭಾಗ, ಎಪಿಎಂಸಿ, ಕುರುಂಜಿಭಾಗ್, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಮುಳಿಯ ಮೈದಾನ ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀರಾಮಪೇಟೆ ಸುಳ್ಯ, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಆಟೋ ವರ್ಕ್ಸ್ , ಭಗವತಿ ಹಾರ್ಡ್ ವೇರ್ಸ್ ರಥಬೀದಿ ಮುಂತಾದ ಕಡೆಗಳಲ್ಲಿ ಅಟ್ಟಿ ಮಡಕೆ ಒಡೆಯುವ ಆಕರ್ಷಕ ಸ್ಪರ್ಧೆಯು ನಡೆಯಲಿದೆ ಎಂದು ವಿ.ಹೆಚ್.ಪಿ ಅಧ್ಯಕ್ಷ ಸೋಮಶೇಖರ ಪೈಕ ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂ. 15,000 ಮತ್ತು ಶಾಶ್ವತ ಫಲಕ, ದ್ವಿತೀಯ ರೂ. 10,000 ಮತ್ತು ಶಾಶ್ವತ ಫಲಕ, ತೃತೀಯ ರೂ.7,000 ಮತ್ತು ಶಾಶ್ವತ ಫಲಕ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ ರವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ರಜತ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ವ್ಯವಸ್ಥಾ ಪ್ರಮುಖರಾದ ಸನತ್ ಚೊಕ್ಕಾಡಿ, ಭಾನುಪ್ರಕಾಶ್ ಪೆರುಮುಂಡ, ನಗರ ಬಜರಂಗದಳ ಸಂಚಾಲಕ ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು.