ಸುಳ್ಯ:ಸುಳ್ಯ ತಾಲೂಕು ಮಿಲಾದ್ ಸಮಿತಿ ವತಿಯಿಂದ ಬೃಹತ್ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ ನಾಳೆ(ಸೆ.13) ಸುಳ್ಯದಲ್ಲಿ ನಡೆಯಲಿದೆ ಎಂದು ತಾಲೂಕು ಮಿಲಾದ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಿಲಾದ್ ಸಮಿತಿ ಸಂಚಾಲಕ ಕೆ.ಎಸ್.ಉಮ್ಮರ್ ಮಾತನಾಡಿ’ಸಕಲ ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯ ಬೆಳಕಾಗಿ ಬಂದ
ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1500ನೇ ಜನ್ಮದಿನದ ಮಾಸಾಚರಣೆ ಅಂಗವಾಗಿ ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ವತಿಯಿಂದ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ ಮತ್ತು ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ ಪ್ರವಾದಿ ಸಂದೇಶ ಜಾಥಾ ಮತ್ತು ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಬೃಹತ್ ಕಾಲ್ನಡಿಗೆ ಜಾಥಕ್ಕೆ ನಾಳೆ ಸಂಜೆ 4ಕ್ಕೆ ಮೊಗರ್ಪಣೆ ಮಸೀದಿ ಬಳಿಯಿಂದ ಚಾಲನೆ ನೀಡಲಾಗುತ್ತದೆ. ಜಾಥಾದಲ್ಲಿ 30ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿದೆ. ಶಿಸ್ತುಬದ್ಧ ಸ್ಕೌಟ್ ತಂಡಗಳು, ಇಸ್ಲಾಮಿಕ್ ಸಂಪ್ರಾದಾಯಿಕ ಕಲೆಯನ್ನು ಬಿಂಬಿಸುವ ಧಪ್ ತಂಡಗಳು ಜಾಥಾಕ್ಕೆ ಮೆರುಗು ನೀಡಲಿವೆ. ಪ್ರವಾದಿ ಕೀರ್ತನೆ, ಸಂದೇಶ ಸಾರುವ ಘೋಷವಾಕ್ಯ ಮೊಳಗುವ ಜಾಥಾ ಮೊಗರ್ಪಣೆ ಮಸೀದಿ ಬಳಿಯಿಂದ ಆರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಸಮಾಪನಗೊಳ್ಳಲಿದೆ. ನಂತರ

ಸಂಜೆ ಗಂಟೆ 7ರಿಂದ ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ ಪ್ರವಾದಿ ಸಂದೇಶ ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಉದ್ಘಾಟಿಸುವರು. ಸಯ್ಯದ್ ತ್ವಾಹಿರ್ ಸಅದಿ ತಂಙಳ್ ದುವಾ: ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಕೇರಳದ ಪ್ರಖ್ಯಾತ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ಹಾಗೂ ಪ್ರಭಾಷಣಗಾರರಾಗಿ ಎಸ್.ಎನ್. ಬಶೀರ್ ಮಂಜೇಶ್ವರ, ಹುಸೇನ್ ಅಹ್ಸನಿ ಮೂರ್ನಾಡ್, ರಿಯಾಝ್ ಕಡಂಬು ಭಾವಹಿಸಲಿದ್ದಾರೆ. ಧಾರ್ಮಿಕ, ಸಾಮಾಜಿಕ ನೇತಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಸ್.ಉಮ್ಮರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಮಿಲಾದ್ ಸಮಿತಿ ಅಧ್ಯಕ್ಷ ಜುನೈದ್ ಎನ್.ಎ., ಖಜಾಂಜಿ ಉನೈಸ್ ಪೆರಾಜೆ ಮಾತನಾಡಿದರು. ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ, ಅಬ್ದುಲ್ ಖಾದರ್ ಸಂಗಂ, ಇಕ್ಬಾಲ್ ಸುಣ್ಣಮೂಲೆ, ನವಾಸ್ ಜಯನಗರ ಉಪಸ್ಥಿತರಿದ್ದರು.












