ಸುಳ್ಯ:ದೇಶದ ಸಮಗ್ರತೆಗೆ ಮತ್ತು ಭವಿಷ್ಯಕ್ಕೆ ಎಲ್ಲರೂ ಮಾತದಾನ ಮಾಡುವುದು ಬಹಳ ಮುಖ್ಯ ಎಂದು ಕೆ. ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಅಭಿಪ್ರಾಯಪಟ್ಟರು. ಅವರು ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಮತ್ತು ತ್ರಿತೀಯ ಲಿಂಗಿಗಳ ಹಕ್ಕು ರಕ್ಷಣಾ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯುವ ಜನರು ಸಾಮಾಜಿಕ ಜವಾಬ್ದಾರಿಯನ್ನು
ಅರಿತುಕೊಳ್ಳಬೇಕು, ಎಲ್ಲರೂ ಮತದಾನ ಮಾಡುವುದಲ್ಲದೆ ಇತರರಿಗೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ತಮ್ಮ ಹಕ್ಕುಗಳನ್ನು ಸರಿಯಾಗಿ ಚಲಾಯಿಸಿ ಆ ಮೂಲಕ ಉತ್ತಮ ಜನಪ್ರತಿನಿಧಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕಿ ಚಂದ್ರಮತಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದ ಸಂಚಾಲಕ ಅನಿಲ್ ಕುಮಾರ್ ಎಸ್. ಉಪಸ್ಥಿತರಿದ್ದರು.ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ ವಂದಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.









