ಸುಳ್ಯ:ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಧಾರ್ಮಿಕ ಚಿಂತನಾ ಸಮಿತಿ ಇದರ ವತಿಯಿಂದ ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ವಾರ್ಷಿಕೋತ್ಸವ ಡಿ.7ರಂದು ಅಂಬೆಟಡ್ಕದ ಗಿರಿದರ್ಶನಿ ಸಭಾಭವನದಲ್ಲಿ ನಡೆಯಲಿದೆ ಎಂದು ಮರಾಟಿ ಧಾರ್ಮಿಕ ಚಿಂತನಾ ಸಮಿತಿ(ಸಂಪಾದಕ ಮಂಡಳಿ) ಹಾಗೂ ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪಾದಕ ಮಂಡಳಿಯ
ಪ್ರಧಾನ ಸಂಪಾದಕ ಗೋಪಾಲ ನಾಯ್ಕ ದೊಡ್ಡೇರಿ ಹಾಗೂ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಮರಾಟಿ ಸಮುದಾಯದ ಕುಟುಂಬಗಳಲ್ಲಿ ನಡೆದುಕೊಂಡು ಬರುತ್ತಿರುವ ಪ್ರಮುಖ ಆರಾಧನೆಯಾಗಿರುವ ಶ್ರೀ ಮಹಮ್ಮಾಯಿ ದೇವಿಯ ಗೋಂದೋಳು ಪೂಜೆ ಸಹಿತ, ಮದುವೆ, ಇನ್ನಿತರ ಆಚಾರ ವಿಚಾರಗಳು ಏಕರೂಪದಲ್ಲಿರಬೇಕೆಂಬ ಕಾರಣಕ್ಕೆ ರಚಿತವಾಗಿರುವ ಗೋಂದೋಳು ಪೂಜೆಯ ಹಿನ್ನೆಲೆ, ಆಚರಣೆಯ ವಿಧಿವಿಧಾನಗಳು ಮತ್ತು ಇತರ ಪ್ರಮುಖ ಆಚರಣೆಗಳು ಪುಸ್ತಕ ದಲ್ಲಿರಲಿದೆ.ಕಳೆದ ಮೂರು ವರ್ಷಗಳ ಹಿಂದೆ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಮರಾಟಿ ಧಾರ್ಮಿಕ ಚಿಂತನಾ ಸಮಿತಿಯನ್ನು

ರಚಿಸಿಕೊಂಡು ಈ ಪುಸ್ತಕ ರಚಿಸಲ್ಪಟ್ಟಿದೆ.ಇದರ ಅಧ್ಯಕ್ಷರಾದ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲ ನಾಯ್ಕ ದೊಡ್ಡೇರಿಯವರ ಸಂಪಾದಕತ್ವದಲ್ಲಿ 12 ಮಂದಿ ಸದಸ್ಯರನ್ನು ಒಳಗೊಂಡ ಸಂಪಾದಕೀಯ ಮಂಡಳಿ ರಚಿಸಿಕೊಂಡು ಮಾಹಿತಿ ಕಳೆಹಾಕಲಾಗಿದೆ. ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಕಾಸರಗೋಡು ಮೊದಲಾದ ಕಡೆ ಗೋಂದೋಳು ಪೂಜೆ ಮಾಡುವ ಪೂಜಾರಿಗಳನ್ನು, ಸಮಾಜದ ಹಿರಿಯರನ್ನು ಸಂದರ್ಶಿಸಿ ,ಮಾಹಿತಿ ಕ್ರೋಢೀಕರಿಸಿ ಪುಸ್ತಕ ರಚಿಸಲಾಗಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ್ ನೆರವೇರಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಪುತ್ತೂರು ಶ್ರೀ ಮಹಮ್ಮಾಯಿ ಸೌಹಾರ್ದ ಸ.ಸಂಘದ ಅಧ್ಯಕ್ಷ ಕೆ.ಶೀನ ನಾಯ್ಕ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುರೇಶ್ ಎಂ., ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಭಾಗವಹಿಸಲಿದ್ದಾರೆ. ಪುಸ್ತಕದ ಸಂಪಾದಕರಾದ ಗೋಪಾಲ ನಾಯ್ಕ್ ದೊಡ್ಡೇರಿ, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ.ಕೆ.ಸುಂದರ ನಾಯ್ಕ್, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ ಹೊನ್ನೇಡಿ ಉಪಸ್ಥಿತರಿರುತ್ತಾರೆ. ಗೌರವ ಉಪಸ್ಥಿತರಾಗಿ ದ.ಕ.ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಸುಂದರ ನಾಯ್ಕ ವಿಟ್ಲ, ಕೊಡಗು ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ನಾಯ್ಕ, ಬಂಟ್ವಾಳ ತಾ. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಪೆರ್ಣೆ,ಪುತ್ತೂರು ತಾ. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಪಾಂಗಲಾಯಿ, ಬೆಳ್ತಂಗಡಿ ತಾ.ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಎಚ್.ಎಲ್., ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಇದರ ಅಧ್ಯಕ್ಷ ಕೆ.ಈಶ್ವರ ನಾಯ್ಕ್ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಇತ್ತೀಚೆಗೆ ಮರಾಟಿ ಸಮುದಾಯದವರಿಗೆ ನಡೆದ ಕ್ರೀಡಾಕೂಟದ ಬಹುಮಾನ ವಿತರಣೆ ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಬಾಲಕೃಷ್ಣ ನಾಯ್ಕ್ ಹಾಗೂ ಗೋಪಾಲ ನಾಯ್ಕ್ ದೊಡ್ಡೇರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕಾರ್ಯಕಾರಿ ಸದಸ್ಯ ಜನಾರ್ದನ ನಾಯ್ಕ್ ಕೇರ್ಪಳ, ಪುಸ್ತಕದ ಉಪಸಂಪಾದಕ ಭವಾನಿಶಂಕರ ಕಲ್ಮಡ್ಕ, ಗಿರಿದರ್ಶಿನಿ ಸಭಾಭವನದ ಕಚೇರಿ ವ್ಯವಸ್ಥಾಪಕ ಪುನಿತ್ ಮುಂಡಕಜೆ ಉಪಸ್ಥಿತರಿದ್ದರು.













