ನವದೆಹಲಿ: ಮಂಗಳೂರನ್ನು ಪ್ರಮುಖ ’ಡೇಟಾ ಸೆಂಟರ್ ಹಬ್ ’ಆಗಿ ಅಭಿವೃದ್ಧಿಪಡಿಸುವ ಮೂಲಕ ಭಾರತದ ಡಿಜಿಟಲ್ ಬೆಳವಣಿಗೆಯಲ್ಲಿ ನೆಚ್ಚಿನ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನವದೆಹಲಿಯಲ್ಲಿ ಕಾರ್ಯದರ್ಶಿ ಕೃಷ್ಣನ್ ಅವರನ್ನು ಭೇಟಿಯಾದ ಸಂಸದರು, ಮಂಗಳೂರು ನಗರ ಹೊಂದಿರುವ
ಅಗಾಧ ಸಾಮರ್ಥ್ಯ, ವ್ಯೂಹಾತ್ಮಕ ಅನುಕೂಲತೆ ಹಾಗೂ ಇಕೋಸಿಸ್ಟಮ್ ಬಗ್ಗೆ ಮನವರಿಕೆ ಮಾಡಿದ್ದಾರೆ. ಇಲ್ಲಿರುವ ಭೌಗೋಳಿಕ, ತಾಂತ್ರಿಕವಾದ ಮೂಲಸೌಕರ್ಯಗಳ ಬಗ್ಗೆ ವಿವರಿಸಿದ ಅವರು, ನಮ್ಮ ಕರಾವಳಿ ಕಡಿಮೆ ಭೂಕಂಪನ ಅಪಾಯವಿರುವ, ಧಾರಾಳ ನೀರಿನ ಸಂಪನ್ಮೂಲ ಮತ್ತು ಸಮುದ್ರಾಂತರ ಇಂಟರ್ನೆಟ್ ಕೇಬಲ್ ಮಾರ್ಗಗಳಿಗೆ ಹತ್ತಿರವಿರುವ ಪ್ರದೇಶವಾಗಿದ್ದು, ಇಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಇಂತಹ ಮೂಲಸೌಕರ್ಯವು ಪ್ರಾದೇಶಿಕ ಇಂಟರ್ನೆಟ್ ವೇಗವನ್ನು ಸುಧಾರಿಸುವುದರ ಜೊತೆಗೆ ಭಾರತದ ಡೇಟಾ ಸಾಮರ್ಥ್ಯ ಮತ್ತು ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ. ಮಂಗಳೂರನ್ನು ಭಾರತದ ಪ್ರಾದೇಶಿಕ ಡೇಟಾ ಬ್ಯಾಕ್ಬೋನ್ ಆಗಿ ಬೆಳೆಸುವುದಕ್ಕೆ ವಿಪುಲ ಅವಕಾಶ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಮಂಗಳೂರಿನಲ್ಲಿ ಪ್ರತ್ಯೇಕ ಡೇಟಾ ಸೆಂಟರ್ ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಲು ಅಗತ್ಯ ಕ್ರಮ ಹಾಗೂ ಪೂರಕ ನೀತಿಯನ್ನು ರೂಪಿಸಬೇಕೆಂದು ಇದೇ ವೇಳೆ ಸಂಸದರು ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ.
ಮಂಗಳೂರನ್ನು ರಾಷ್ಟ್ರೀಯ ಗುರಿಗಳಿಗೆ ಅನುಗುಣವಾಗಿ ಒಂದು ವ್ಯೂಹಾತ್ಮಕ ಡಿಜಿಟಲ್ ಮತ್ತು ತಂತ್ರಜ್ಞಾನದ ಮುಖ್ಯ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ರೀತಿಯ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.





