ಸುಳ್ಯ: ಸಮಾಜದ ಅಭಿವೃದ್ಧಿಗೆ ಸರಕಾರ ವಿವಿಧ ಕಾರ್ಯಕ್ರಮಗಳಡಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಫಲಾನುಭವಿಸಿಗೆ ನೀಡುತ್ತಿದೆ. ಇಂತಹ ಸರಕಾರಿ ಯೋಜನೆಗಳನ್ನು ಪಡೆದ ಫಲಾನುಭವಿಗಳು ಅದನ್ನು ಇತರರಿಗೂ ತಲುಪಿಸಲು ಕೆಲಸ ಮಾಡುಬೇಕು. ಇದು ಸರಕಾರಿ ಸವಲತ್ತುಗಳು ಎಲ್ಲರಿಗೂ ಹಂಚಿಕೆಯಾಗಲು ಸಹಕಾರಿಯಾಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಸುಳ್ಯದ ಪುರಭವನದಲ್ಲಿ
ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ನಡೆದ ವಿಕಲಚೇತನರ ಸಮನ್ವಯ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ ವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸರಕಾರದ ಯೋಜನೆಗಳು ಎಲ್ಲರಿಗೂ ಹಂಚಿಕೆಯಾದಲ್ಲಿ ಮಾತ್ರ ಸರ್ವ ಏಳಿಗೆ ಸಾಧ್ಯ ಎಂದರು.
ವಿಕಲಚೇತನರ ಬೇಡಿಕೆಗಳ ಬಗ್ಗೆ ನಾನು ಈಗಾಗಲೇ ಸದನದಲ್ಲಿ ಮಾತನಾಡಿದ್ದೇನೆ. ಮುಖ್ಯಮಂತ್ರಿ ಹಾಗೂ ಸಚಿವರ ಬಳಿಯೂ ಮಾತನಾಡಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುತ್ತಿದ್ದೇನೆ. ವಿಕಲಚೇತನರು ಸ್ವಾವಲಂಬಿಯಾಗಿ ಮನೆಯವರೊಂದಿಗೆ ಬದುಕಬೇಕಿದೆ ಎಂದ ಅವರು ವಿಕಲಚೇತನರಲ್ಲಿ ನಡೆದಾಡಲು ಸಾಧ್ಯವಾಗದೇ ಇರುವಂತವರನ್ನು ಜೀವನ ಪರ್ಯಾಂತ ನೋಡಿಕೊಳ್ಳುವ ಮನೆಯವರಿಗೂ ಸರಕಾರ ಸಂಭಾವನೆ ನೀಡಬೇಕಿದೆ ಎಂದರು.
ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿಕಲಚೇತನರಿಗೂ ಶಿಕ್ಷಣ ನೀಡಲಾಗಿತ್ತಿದೆ. ಅವರ ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ಇವೆ ಎಂದ ಅವರು ನಮ್ಮ ಕಛೇರಿಗಳಲ್ಲಿ ವಿಕಲಚೇತನರಿಗೆ ಮೊದಲ ಆದ್ಯತೆಯಲ್ಲಿ ಕೆಲಸ ಮಾಡಿ ಕೊಡುತ್ತೇವೆ ಎಂದರು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪೆರಮೇಶ್, ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಸಿಡಿಪಿಒ ಶೈಲಜಾ, ಕೆನರಾ ಬ್ಯಾಂಕ್ ಮ್ಯಾನೇಜರ್ ರಣವೀರ್, ನ.ಪಂ. ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್. ಉಮ್ಮರ್, ಡೇವಿಡ್ ಧೀರಾ ಕ್ರಾಸ್ತಾ, ಬುದ್ಧ ನಾಯ್ಕ್, ಸರೋಜಿನಿ ಪೆಲ್ತಡ್ಕ, ಸುಧಾಕರ್, ಶಶಿಕಲಾ ನೀರಬಿದಿರೆ, ಶರೀಫ್ ಕಂಠಿ, ಶಿಲ್ಪಾ, ಬಾಲಕೃಷ್ಣ ರೈ, ದ.ಕ. ಅಂಗವಿಕಲರ ಕಲ್ಯಾಣಾಧಿಕಾರಿ ಭಾಸ್ಕರ ಜೆ. ಮತ್ತಿತರರು ಉಪಸ್ಥಿತರಿದ್ದರು. ನಗರ ವಿಕಲಚೇತನರ ಮೇಲ್ವಿಚಾರಕ ಪ್ರವೀಣ್ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ನ.ಪಂ. ಸಿಬ್ಬಂದಿ ಜಯಲಕ್ಷ್ಮಿ ಸ್ವಾಗತಿಸಿದರು. ತೀರ್ಥಕಲ ವಂದಿಸಿದರು. ದಿಲೀಪ್ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಬ್ಯಾಂಕಿನ ಎಲ್.ಡಿ.ಒ. ಸೌಮ್ಯ ಹಾಗೂ ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕಿ ಸುಜಾತ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.