ಮಂಗಳೂರು: ಮುಂಬರುವ 67ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಉತ್ಸಾಹದಿಂದ ನಾಡಿನಾದ್ಯಂತ ಆಚರಿಸುವ ಹಿನ್ನಲೆಯಲ್ಲಿ ಇದೇ ಅಕ್ಟೋಬರ್ 28ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಗತ್ತಿನಾದ್ಯಂತ ಕೋಟಿ ಕಂಠ ಗಾಯನವನ್ನು ಹಮ್ಮಿಕೊಳ್ಳಲಾಗಿದ್ದು, ವಿಶ್ವಾದ್ಯಂತ ಇರುವ ಕನ್ನಡಿಗರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಕರೆ ನೀಡಿದರು. ಅವರು ಅ.18ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಕೋಟಿ ಕಂಠ ಗಾಯನದ
ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅ.28ರ ಬೆಳಗ್ಗೆ 11 ಗಂಟೆಗೆ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಹುಯಿಲಗೋಲ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ. ಡಿ.ಎಸ್. ಕರ್ಕಿ ರಚನೆಯ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿಯವರು ಬರೆದ ವಿಶ್ವ ವಿನೂತನ ವಿದ್ಯಾಚೇತನ ಹಾಗೂ ಹಂಸಲೇಖ ಬರೆದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಆರು ಗೀತೆಗಳನ್ನು ಹಾಡಬೇಕು, ನಾಡಿನ ಮೂಲೆ ಮೂಲೆಗಳಲ್ಲಿ, ಗ್ರಾಮ ಗ್ರಾಮಗಳು ಹತ್ತು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ, ಈ ದ್ವನಿ ಅನುರಣಿಸಬೇಕು, ನೆಲ, ಜಲ ಹಾಗೂ ಆಕಾಶಗಳಲ್ಲಿಯೂ ಕನ್ನಡ ಧ್ವನಿ ಕೇಳಿಸಬೇಕು, ಅದಕ್ಕಾಗಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು, ಕನ್ನಡಾಭಿಮಾನಿಗಳು ಅದಕ್ಕೆಂದೇ ರಚಿಸಲಾಗಿರುವ ಕ್ಯೂ ಆರ್ ಉಪಯೋಗಿಸಿ ನೋಂದಾಯಿಸಿಕೊಳ್ಳಬೇಕು ಎಂದರು.ಕೋಟಿ ಕಂಠ ಗಾಯನದ ನಂತರ ಅವುಗಳ ಫೋಟೋ, ವಿಡಿಯೋ ಹಾಗೂ ಮಾಹಿತಿಯನ್ನು ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಿ, ಇಲಾಖೆಯ ಜಾಲತಾಣಕ್ಕೆ ಅಪ್ಡೇಟ್ ಮಾಡಬೇಕು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಇಲಾಖೆ ವತಿಯಿಂದ ಅಭಿನಂದನಾ ಪತ್ರವನ್ನು ನೀಡಲಾಗುವುದು, ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಎಲ್ಲಾ ಸಂಘ ಸಂಸ್ಥೆಗಳು, ಕಲಾವಿದರು, ಕಾರ್ಮಿಕರು, ಸರ್ಕಾರಿ ನೌಕರರು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಒಳಗೊಂಡಂತೆ ಸರ್ವರೂ ಭಾಗವಹಿಸಬೇಕು ಎಂದು ಅವರು ತಿಳಿಸಿದರು.
ಅಂದು ಮೂವತ್ತು ನಿಮಿಷ ನಡೆಯುವ ಕಾರ್ಯಕ್ರಮದಲ್ಲಿ ಈ ಆರು ಹಾಡುಗಳನ್ನು ಹಾಡಲು ತಾಲೀಮು ನಡೆಸಿದರೆ ಇನ್ನು ಉತ್ತಮ, ಅರ್ಧಗಂಟೆಯ ನಂತರ ಇನ್ನು ಹೆಚ್ಚಿನ ಕನ್ನಡ ಹಾಡುಗಳನ್ನು ಹಾಡುವ ಅಭಿಲಾಷೆಯುಳ್ಳವರು ಹಾಡಬಹುದಾಗಿದೆ ಜಿಲ್ಲೆಯಲ್ಲಿ 7 ಲಕ್ಷ ಜನರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದ ಸಚಿವರು, ಅಕ್ಟೋಬರ್ 28ರಂದು ವಿವಿಧ ದೇಶಗಳಲ್ಲಿರುವ ಕನ್ನಡಿಗರು ಇದಕ್ಕೆ ಜೊತೆಗೂಡುವಂತೆ ಕೋರಲಾಗಿದೆ, ಕಾರ್ಯಕ್ರಮ ಆರಂಭಕ್ಕೂ ಅರ್ಧ ಗಂಟೆ ಮುಂಚಿತವಾಗಿ ನಿಗದಿಪಡಿಸಿದ ಸ್ಥಳಕ್ಕೆ ಹಾಜರಾಗಬೇಕು, ಅಲ್ಲಿ ಮೈಕ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಹಾಡುಗಳನ್ನು ಹಾಡಬೇಕು, ಈ ಹಾಡುಗಳ ಟ್ರ್ಯಾಕ್ಗಳನ್ನು ಆನ್ಲೈನ್ನಲ್ಲಿ ಲಭ್ಯವಿದೆ, ಅವುಗಳನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳಬಹುದಾಗಿದೆ ಇದೇ ತಿಂಗಳ 20ರೊಳಗೆ ಆಸಕ್ತರು ಕ್ಯೂ ಆರ್ ಕೋಡ್ ಬಳಸಿ ನೋಂದಾಯಿಸಿಕೊಳ್ಳುವಂತೆ ಸಚಿವರು ತಿಳಿಸಿದರು.
ಜಿಲ್ಲೆಯ ಮಂಗಳೂರಿನ ತಣ್ಣೀರು ಬಾವಿ, ಪಣಂಬೂರು ಬೀಚ್ ಹಾಗೂ ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಸೇರಿದಂತೆ ರಾಜ್ಯದಲ್ಲಿ ಪ್ರಮುಖವಾಗಿ ಈ ಹಾಡುಗಳನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ, ಕಂಠೀರವ ಕ್ರೀಡಾಂಗಣದಲ್ಲಿ 50,000 ಜನರ ಸಮೂಹ ಗಾನನ, ಮೆಟ್ರೋಗಳಲ್ಲಿ, ಹಾರುವ ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಮಾಲ್ಗಳಲ್ಲಿ, ಬಸ್ಸು, ರೈಲು, ರಿಕ್ಷಾ ನಿಲ್ದಾಣಗಳಲ್ಲಿ, ಕಾರ್ಖಾನೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಗೀತ ಗಾಯನದಲ್ಲಿ ನಡೆಯಲಿದೆ ಎಂದರು. ಹೈಕೋರ್ಟ್ ಆವರಣ, ಕೆಂಪೇಗೌಡ ವಿಮಾನ ನಿಲ್ದಾಣ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಹಲಸೂರು ಕೆರೆ, ಬೆಂಗಳೂರು ಮೆಟ್ರೋ ಬಿಎಂಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಹದೇವಪುರ ಐ.ಟಿ. ಪಾರ್ಕ್, ಬೊಮ್ಮನಹಳ್ಳಿ ಗಾಮೆರ್ಂಟ್ಸ್, ಕಾರ್ಖಾನೆಗಳು ಮತ್ತು ಲಾಲ್ಬಾಗ್ಗಳಲ್ಲಿ ಸಮೂಹಗಾನ ನಡೆಯಲಿದೆ, ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಶೃಂಗೇರಿ, ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ, ಹಂಪಿ ಕಲ್ಲಿನ ರಥದ ಬಳಿ, ಶ್ರೀ ಸಿದ್ದಗಂಗಾ ಮಠದಲ್ಲಿ, ಪಾವಗಡ ಸೌರಶಕ್ತಿ ಘಟಕದಲ್ಲಿ, ಬಿಜಾಪುರದ ಗೋಲ್ ಗುಂಬಜ್ನಲ್ಲಿ, ಸುವರ್ಣ ಸೌಧ, ಐಹೊಳೆ, ಪಟ್ಟದಕಲ್ಲು, ಬೀದರ್ ಗುರುದ್ವಾರದಲ್ಲಿ, ಜೋಗ ಜಲಪಾತ ಸೇರಿದಂತೆ ನಾಡಿನ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳಲ್ಲಿ ಕನ್ನಡದ ಹಾಡು ಪ್ರತಿದ್ವನಿಸಲಿದೆ ಎಂದು ತಿಳಿಸಿದರು. ಈ ಕೋಟಿ ಕಂಠ ಗಾಯನಕ್ಕೆ ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಸಮೂಹವನ್ನು ಸಿದ್ದ ಪಡಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದ ಸಚಿವರು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.