ಸುಳ್ಯ:ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 25ನೇ ವರ್ಷದ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರ ಎ.20ರಿಂದ ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುಟ್ಟ ಕಂಠಗಳಿಂದ ವೇದಘೋಷಗಳು ಝೇಂಕರಿಸುವ ಮೂಲಕ ಸರಿಸುಮಾರು ಒಂದು ತಿಂಗಳ ಪರ್ಯಂತ ಇಲ್ಲಿನ
ಪರಿಸರ ಪಾವನಗೊಳ್ಳುತ್ತದೆ ಜೊತೆಗೆ ಭಿನ್ನ ಭಿನ್ನ ಕಲಾಪ್ರಕಾರಗಳು ಅರಳಿ ಮೇಲೈಸಿ ಕಣ್ಸೆಳೆಯುತ್ತವೆ. ಯೋಗದ ಹಲವು ಆಸನಗಳನ್ನು ಅಳವಡಿಸಿಕೊಂಡ ಪುಟಾಣಿ ಯೋಗಪಟುಗಳು ದೇಹ ಮನಸ್ಸುಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವತ್ತ ಮನಮಾಡುತ್ತಾರೆ. ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಈ ಶಿಬಿರದಲ್ಲಿ ಈ ರೀತಿಯ ಹಲವು ವೈಶಿಷ್ಟ್ಯಗಳು ಮೈದಳೆಯುತ್ತದೆ.
ಸಹಸ್ರಾರು ವರ್ಷಗಳ ಹಿಂದಿನ ವೇದಮಂತ್ರಗಳು ಇಂದಿಗೂ ಜಗತ್ತಿನಾದ್ಯಂತ ಮಾರ್ದನಿಸುತ್ತಿವೆಯೆಂದರೆ ಅದಕ್ಕೆ ವೈದಿಕ ಪರಂಪರೆಯ ಸದ್ದಿಲ್ಲದ ಸೇವೆಯೇ ಕಾರಣ. ಅಲ್ಲಲ್ಲಿ ನಡೆಯುವ ವೇದ ತರಗತಿಗಳು, ವೇದ ಶಿಬಿರಗಳ ಮೂಲಕ ವೇದ ಪರಂಪರೆಯನ್ನು ಶಿಷ್ಯರಿಂದ ಶಿಷ್ಯರಿಗೆ ದಾಟಿಸುತ್ತಾ ವೇದಶಾಸ್ತ್ರಗಳ ಉಳಿವಿಗೆ ಹಲವಾರು ವೇದ ಪಾಠಶಾಲೆಗಳು ಶ್ರಮಿಸುತ್ತಿವೆ.
ಅಂತಹ ವೇದ ಪಾಠಶಾಲೆಗಳ ಪೈಕಿ ಸುಳ್ಯದ ಹಳೆಗೇಟಿನ ವಿದ್ಯಾನಗರದಲ್ಲಿ ಕಾರ್ಯಾಚರಿಸುತ್ತಿರುವ ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಕೊಡುಗೆಯೂ ಅನನ್ಯವಾದುದು. 25 ವರ್ಷಗಳ ಹಿಂದೆ ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಆರಂಭಗೊಂಡ ಶಿಬಿರಕ್ಕೆ ವೇದಾಧ್ಯಾಯಿಗಳಿಂದ ಮತ್ತಷ್ಟು ಬೇಡಿಕೆ ಬರತೊಡಗಿತು. ಒಂದು ಕಡೆ ವೇದ ಕಲಿಕೆಗೆ ಬೇಡಿಕೆಯೂ ಇತ್ತು. ಮತ್ತೊಂದೆಡೆ ವೇದಾಧ್ಯಾಯಿಗಳ ಜ್ಞಾನದಾಹವನ್ನು ತಣಿಸುವ ವೇದ ಪಾಠಶಾಲೆಗಳ ಕೊರತೆಯೂ ಇತ್ತು. ಹೀಗಾಗಿ ನಾಗರಾಜ ಭಟ್ ಅವರು ವೇದ ಪಾಠಶಾಲೆಯನ್ನು

ಮುಂದುವರಿಸಿದರು.ಕ್ರಮೇಣ ಹಂತಹಂತವಾಗಿ ಶಿಬಿರಾರ್ಥಿಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಹೀಗೆ ಆಚಾನಕ್ಕಾಗಿ ಹುಟ್ಟಿಕೊಂಡ ವೇದ ಶಿಬಿರವು ಮುಂದೆ ವೇದದ ಜೊತೆಗೆ ಇನ್ನಿತರ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಜೋಡಿಸಿಕೊಂಡು ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ’ ಅನ್ನುವ ಅಧಿಕೃತ ಸಂಸ್ಥೆಯಾಗಿ ನೋಂದಣಿಗೊಂಡು ಲೋಕಾರ್ಪಣೆಗೊಂಡು ಇಂದಿಗೆ 25 ವಸಂತಗಳನ್ನು ಪೂರ್ಣಗೊಳಿಸಿ ರಜತ ಮಹೋತ್ಸವದತ್ತ ಮುಂದುವರಿಯುತ್ತಿದೆ. ಸುಮಾರು 35 ದಿನಗಳ ಪಠ್ಯಂತ ಆರಂಭದಲ್ಲಿ ವೇದ ತರಗತಿಯ ಉದ್ದೇಶವನ್ನಷ್ಟೇ ಹೊಂದಿದ್ದ ಪ್ರತಿಷ್ಠಾನ, ಆ ಬಳಿಕ ವಿವಿಧ ಚಟುವಟಿಕೆಗಳ ಮೂಲಕ ತನ್ನ ಪರಿಧಿಯನ್ನು ವಿಸ್ತರಿಸಿತು. ಮೊದಲಿಗೆ ಪ್ರಾಚೀನ ಭಾರತದ ಯೋಗ ಪದ್ಧತಿಯನ್ನು ಶಿಬಿರದಲ್ಲಿ ಅಳವಡಿಸಿಕೊಂಡು ಶಿಬಿರಾರ್ಥಿಗಳಿಗೆ ಯೋಗ ಪರಿಣಿತರಿಂದ ಯೋಗಾಭ್ಯಾಸವನ್ನು ಆರಂಭಿಸಿತು. ತದನಂತರ ಕಲಾಕ್ಷೇತ್ರದ ವಿವಿಧ ಪ್ರಕಾರಗಳನ್ನು ಶಿಬಿರದಲ್ಲಿ ಜೋಡಿಸಿಕೊಂಡು ಕರಾವಳಿಯ ಗಂಡುಕಲೆಯಾದ ಯಕ್ಷಗಾನ, ಕಂಸಾಳೆ – ವೀರಗಾಸೆಯಂತಹ ಜಾನಪದ ಕಲೆಗಳು, ಭಜನೆ – ಸಂಗೀತ ಮುಂತಾದ ಲಲಿತಕಲೆಗಳು, ಪೇಪರ್ ಕಟ್ಟಿಂಗ್ ಮುಂತಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಇದರ ಜೊತೆಗೆ ಇತ್ತೀಚಿನ ಕೆಲ ವರ್ಷದಿಂದ ಶಿಬಿರಾರ್ಥಿಗಳಿಗೆ ಈಜು ತರಬೇತಿಯನ್ನು ಕೂಡಾ ಜೋಡಿಸಿಕೊಂಡಿದೆ. ಪ್ರತೀ ವರ್ಷವೂ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ತರಗತಿ ನಡೆಸಲಾಗುತ್ತದೆ.
ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಹಿಂದೂ ಧರ್ಮದ ನಂಬಿಕೆಗಳು ಮತ್ತು ಆಚರಣೆಗಳ ಹೊಂದಿರುವ ವೈಜ್ಞಾನಿಕ ಕಾರಣಗಳು, ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣುಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಪುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ. ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಸುಮಾರು 35 ದಿನಗಳ ಕಾಲ ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ 200 ಶಿಬಿರಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಇಪ್ಪತ್ತೈದನೆಯ ವರ್ಷದ’ ವೇದ-ಯೋಗ-ಕಲಾ ಶಿಬಿರವು ಸಂಪೂರ್ಣ ಉಚಿತವಾಗಿ ನಡೆಯಲಿದೆ.
ಉದ್ಘಾಟನಾ ಸಂಭ್ರಮ:
ಏ. 20ರಂದು ಭಾನುವಾರ ಬೆಳಗ್ಗೆ 10.30ಕ್ಕೆ ವೇದ ವಿದ್ವಾಂಸರಾದ ವೇದ ಬ್ರಹ್ಮ ಕೇಶವ ಜೋಯಿಸ ವಳಲಂಬೆ ಇವರು ಉದ್ಘಾಟಿಸಲಿದ್ದಾರೆ. ಪುತ್ತೂರಿನ ಪ್ರಸಿದ್ಧ ವಕೀಲರಾದ ಮಹೇಶ ಕಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದು, ಪ್ರಗತಿಪರ ಕೃಷಿಕ ರವಿಶಂಕರ ರಾವ್ ದೇವ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಾಶಂಸನೆಯನ್ನು ಮಾಡಲಿದ್ದಾರೆ ಎಂದು ನಾಗರಾಜ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸಂಚಾಲಕಿ ಶ್ರೀದೇವಿ ನಾಗರಾಜ ಭಟ್, ಸರಣಿ ಪೂಜಾ ಸಂಚಾಲಕ ಗೋಪಾಲಕೃಷ್ಣ ಭಟ್ ಶಿವನಿವಾಸ. ಸದಸ್ಯರಾದ ಸುಜಾತ ರಾಧಾಕೃಷ್ಣ ಮಿತ್ತೂರು ಉಪಸ್ಥಿತರಿದ್ದರು.