ಮಡಿಕೇರಿ:ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ಜಿಲ್ಲಾ ಮತ್ತು ಮಡಿಕೇರಿ ತಾಲ್ಲೂಕು ಕಸಾಪ, ಭಾಗಮಂಡಲ ಹೋಬಳಿ ಕಸಾಪ ಮತ್ತು ಗ್ರಾಮ ಪಂಚಾಯ್ತಿಗಳ ಸಹಯೋಗದೊಂದಿಗೆ ಕರಿಕೆಯಲ್ಲಿ ಜ.27 ರಂದು ‘ಗಡಿ ಉತ್ಸವ’ ನಡೆಯಲಿದೆ. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಭಾಷಾ ಸಂಸ್ಕøತಿಗೆ ಹೆಚ್ಚಿನ ಒತ್ತು ನೀಡುವ ಚಿಂತನೆಯಡಿ ಅದ್ದೂರಿ ಗಡಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗಡಿ ಉತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ಕುರಿತು ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ‘ಕರಿಕೆಯ ಎಳ್ಳುಕೊಚ್ಚಿಯ ಬೇಕಲ್ ಉಗ್ಗಪ್ಪ ನಗರದಲ್ಲಿ
ಅಂದು ಬೆಳಗ್ಗೆ 8.30 ಕ್ಕೆ ಕರಿಕೆ ಗ್ರಾಪಂ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ರಾಷ್ಟ್ರ ಧ್ವಜಾರೋಹಣ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಗಡಿ ಉತ್ಸವಕ್ಕೆ ಚಾಲನೆ ದೊರಕಲಿದೆ. ಬಳಿಕ ಗ್ರಾಮದ ಜಾನಪದ ಕಲಾ ತಂಡಗಳೊಂದಿಗೆ ವೈಭವದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ಗಡಿ ಉತ್ಸವದ ಸಮಾರಂಭವನ್ನು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ, ಎಂಪಿ ಪ್ರತಾಪ ಸಿಂಹ, ಎಂಎಲ್ಸಿ ಸುಜಾ ಕುಶಾಲಪ್ಪ ಒಳಗೊಂಡಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೀತ ಗಾಯನ- ವಿಚಾರಗೋಷ್ಠಿ- ಸಭಾ ಕಾರ್ಯಕ್ರಮದ ಬಳಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ಮೊದಲ ಗೋಷ್ಠಿ ‘ಕರಿಕೆ ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ’ ವಿಷಯದ ಕುರಿತು ನಡೆಯಲಿದ್ದು, ಎರಡನೇ ಗೋಷ್ಠಿ ಮಧ್ಯಾಹ್ನ 3.15 ಗಂಟೆಗೆ ‘ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ’ ವಿಷಯದ ಕುರಿತು ನಡೆಯಲಿದೆ ಎಂದರು.
ಸಾಧಕರಿಗೆ ಸನ್ಮಾನ- ಅಂದು ಸಂಜೆ 4 ಗಂಟೆಗೆ ಗಡಿಭಾಗದ ಸಮಸ್ಯೆಗಳ ಕುರಿತು ನಿರ್ಣಯಗಳ ಮಂಡನೆ ನಡೆಯಲಿದೆ. ನಂತರ ವಿವಿಧ ಕ್ಷೇತ್ರಗಳ ಸಾಧಕರಾದ ಕೋಡಿ ಕೆ. ಪೊನ್ನಪ್ಪ, ಕೆ.ಎಂ. ನೂರುದ್ದೀನ್, ಬೇಕಲ್ ಲೀಲಾವತಿ ರಮಾನಾಥ್, ಎನ್.ಪಿ. ಗಂಗಾಧರ, ಬೇಕಲ್ ದಮಯಂತಿ ಕೃಷ್ಣಪ್ಪ, ರಾಧಾಕೃಷ್ಣ ನಂಬಿಯಾರ್, ಕೆ.ಎ. ಬೋಜಮ್ಮ, ಕೇಶವ ಮಡೆಕಾನ, ಟಿ.ಟಿ. ರಾಜೇಂದ್ರ, ನಂದಿತಾ ಬಿ.ಡಿ.. ಕುಮಾರಿ ನಿನ್ನುಮೋಳ್ ಕೆ.ಎಂ., ಕುಮಾರಿ ಜ್ಯೋತ್ಸ್ನಾ ಕೆ.ವಿ., ತನಿಷ್ಕ ಮುರುಳಿ ಸೇರಿದಂತೆ 13 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದರು.

ಸಮಾರೋಪ ಸಮಾರಂಭ ಸಂಜೆ 5 ಗಂಟೆಗೆ ಕರಿಕೆ ಗ್ರಾಪಂ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ಡಾ. ಮಂತರ್ ಗೌಡ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಕವಿ ಸಾಹಿತಿ ಅರವಿಂದ ಚೊಕ್ಕಾಡಿ ಮಾಡಲಿದ್ದಾರೆ. ಅತಿಥಿಗಳಾಗಿ ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ನಂತರ ಕರಿಕೆ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆಯೆಂದು ತಿಳಿಸಿದರು.
ಗಡಿ ಸಾಂಸ್ಕೃತಿಕ ಉತ್ಸವ ಆಚರಣೆಗೆ ಸ್ವಾಗತ ಸಮಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಮಾತನಾಡಿ, ಗಡಿ ಉತ್ಸವದೊಂದಿಗೆ ಕರಿಕೆ ವ್ಯಾಪ್ತಿಯ ಮೂಲಭೂತ ಸಮಸ್ಯೆಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತದ ಮುಂದಿಟ್ಟು, ಅವುಗಳನ್ನು ಬಗೆಹರಿಸಿಕೊಳ್ಳುವ ಉದ್ದೇಶ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಡಿ ಸಾಂಸ್ಕೃತಿಕ ಉತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಪ್ರಚಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಡಿ.ಬೇಕಲ್ ಉಪಸ್ಥಿತರಿದ್ದರು.












