ಸುಳ್ಯ:ಸುಳ್ಯ ತಾಲೂಕಿನಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಮತ್ತು ಚರ್ಮ ಗಂಟು ರೋಗದ ಲಸಿಕೆ ಅಭಿಯಾನ ಎ.26ರಿಂದ ಆರಂಭಗೊಂಡಿದ್ದು ಜೂ.10ರ ತನಕ 45 ದಿನಗಳ ಕಾಲ ನಡೆಯಲಿದೆ .ಹಸು, ಎತ್ತು, ಎಮ್ಮೆ ,ಹೋರಿ ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾದ ಕಾಲುಬಾಯಿ ಜ್ವರ ರೋಗದ ಲಸಿಕೆಯನ್ನು ಮೂರು ತಿಂಗಳ ಮೇಲ್ಪಟ್ಟ ಎಲ್ಲಾ
ಹಸು ಮತ್ತು ಎಮ್ಮೆಗಳಿಗೆ ರೈತರು ಹಾಕಿಸಿಕೊಳ್ಳಬೇಕು. ಸೀಳುಗೊರಸುಗಳುಳ್ಳ ಪ್ರಾಣಿಗಳಿಗೆ ತಗುಲುವ ಕಾಲುಬಾಯಿ ಜ್ವರದ ಲಸಿಕೆಯನ್ನು ಅತ್ಯಗತ್ಯವಾಗಿ ಹಾಕಿಸಿಕೊಳ್ಳಬೇಕಾಗಿದೆ .ರೈತರಿಗೆ ಆರ್ಥಿಕ ಸಂಕಷ್ಟವನ್ನುಂಟು ಮಾಡುವ ಈ ರೋಗವನ್ನು ತಡೆಗಟ್ಟುವುದು ಅತೀ ಅಗತ್ಯ. ರಾಸುಗಳು ರೋಗದಿಂದ ಮುಕ್ತವಾದರೂ ಸಹ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆಯಾಗುತ್ತದೆ ಆದ್ದರಿಂದ ತಾಲೂಕಿನ ಎಲ್ಲಾ ರೈತ ಬಾಂಧವರು ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮೆಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಸುಳ್ಯ ತಾಲೂಕಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.