ಮಂಗಳೂರು:ಇದೇ ಬರುವ ಮಾರ್ಚ್ 27ಮತ್ತು 28. ರಂದು ಸ್ಪರ್ಶಾ ಕಲಾ ಮಂದಿರ ಬಂಟ್ವಾಳ, ಬಿಸಿ ರೋಡ್ ಇಲ್ಲಿ ನಡೆಯುವ 28 ನೆಯ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ,ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ.ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು
ದ. ಕ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಎಂಪಿ ಶ್ರೀನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪತ್ರಕರ್ತ, ಲೇಖಕರಾದ ಚಿದಂಬರ ಬೈಕಂಪಾಡಿಯವರು ಮುಂಗಾರು, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಮಹತ್ವದ ಕವಿಯಾಗಿ ಗುರುತಿಸಿಕೊಂಡಿರುವ ಇವರು ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ ಇತ್ಯಾದಿ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತುಳು ಪ್ರೇಮಗೀತೆಗಳು ಇವರ ಧ್ವನಿ ಸುರುಳಿ. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಇದು ಮುಂಗಾರು’ ಕೃತಿ ಪತ್ರಿಕೋದ್ಯಮದ ಬಗ್ಗೆಗಿನ ಕೃತಿ. ಹಿರಿಯ ಪತ್ರಕರ್ತರಾದ ವಡ್ಡರ್ಸೆಯವರ ಒಡನಾಡಿಯಾಗಿ ಹತ್ತು ವರ್ಷ ಕಾಲ ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಅವರ ಆಶಯಗಳಿಗೆ ಜೀವ ತುಂಬಿದ್ದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಮೃತ ವಾರಪತ್ರಿಕೆಯಲ್ಲಿ 2 ವರ್ಷ, ದಿವ್ಯವಾಣಿ ವಾರಪತ್ರಿಕೆಯಲ್ಲಿ 3 ವರ್ಷ, ಮುಂಗಾರು ದಿನಪ್ರತಿಕೆ 10 ವರ್ಷ ಮುಖ್ಯ ವರದಿಗಾರರಾಗಿ, ಕನ್ನಡಪ್ರಭ ದಿನಪತ್ರಿಕೆಯಲ್ಲಿ 15 ವರ್ಷ ಪ್ರಧಾನ ವರದಿಗಾರರಾಗಿ ‘ಬಿಂಬದ್ವನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹೀಗೆ ಹತ್ತು ಹಲವು ಮಜಲುಗಳಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಮುಂಗಾರು ಎನ್ನುವ ಪತ್ರಿಕೋದ್ಯಮದ ಕುರಿತ ಪುಸ್ತಕ, ಪ.ಗೋ ಪ್ರಪಂಚ – ಪತ್ರಿಕೋದ್ಯಮ ಕುರಿತ ಪುಸ್ತಕ, ರಾಜಕೀಯ ಒಳಸುಳಿಗಳು ಲೇಖನಗಳು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಕೃತಿ ಹೊರತಂದಿದ್ದಾರೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪತ್ರಕರ್ತರ ಸಂಘದ ಅತ್ಯುತ್ತಮ ತನಿಖಾ ಪತ್ರಕರ್ತ ಗೌರವ ಪ್ರಶಸ್ತಿ, 2025ನೇ ಸಾಲಿನ ಪತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.





