ಸುಳ್ಯ:ಸರಕಾರದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಹೇಳಿದರು. ಅವರು ಸುಳ್ಯ ಕೆವಿಜಿ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು
ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಜನರ ಬಳಿಗೆ ಸರಕಾರವೇ ತೆರಳಿ ಸಮಸ್ಯೆ ಪರಿಹಾರ ಮಾಡುವುದು ಜನತಾ ದರ್ಶನದ ಉದ್ದೇಶ. ಸರಕಾರ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಈ ವರ್ಷ 38 ಸಾವಿರ ಕೋಟಿ, ಮುಂದಿನ ವರ್ಷ 58 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೇರವಾಗಿ ನೀಡುತ್ತೇವೆ ಎಂದರು. ನಿನ್ನೆ ಶ್ರೀರಾಮ ಕ್ಷೇತ್ರದ ಉದ್ಘಾಟನೆ ಆಗಿದೆ. ರಾಮರಾಜ್ಯದ ಕಲ್ಪನೆಯೊಂದಿಗೆ ಸರಕಾರ ಕೆಲಸ ಮಾಡುತಿದೆ.ಎಲ್ಲರ ರಕ್ಚಣೆ, ಪ್ರೀತಿ, ವಿಶ್ವಾಸ, ನ್ಯಾಯ ನೀಡುವುದು ರಾಮರಾಜ್ಯದ ಕಲ್ಪನೆ. ಈ ಕಲ್ಪನೆಯೇ ಸರಕಾರದ ಧ್ಯೇಯ ಎಂದರು.

ಅಡಿಕೆ ಹಳದಿ ರೋಗ ಬಾದಿತ ಕೃಷಿಕರಿಗೆ ವಿಶೇಷ ಪ್ಯಾಕೇಜ್ ನೀಡಿ: ಭಾಗೀರಥಿ ಮುರುಳ್ಯ
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ಸುಳ್ಯ ತಾಲೂಕಿನಲ್ಲಿ ಅಡಿಕೆ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದಿಂದ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಈ ಕೃಷಿಕರಿಗೆ ಪರಿಹಾರವಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು. ಹಳದಿ ರೋಗ ಪೀಡಿತ ಕೃಷಿಕರ ಸಾಲ ಮನ್ನಾ ಮಾಡಬೇಕು ಎಂದು ಹೇಳಿದರು. ಸುಳ್ಯ ತಾಲೂಕಿನಲ್ಲಿ ಅರಣ್ಯ ಸಂಬಂಧಿತ, ರೆವೆನ್ಯೂ ಸಂಬಂಧಿತ ಹಲವು ಸಮಸ್ಯೆಗಳಿವೆ ಇದನ್ನು ಪರಿಹರಿಸಬೇಕು. ಆರೋಗ್ಯ ಇಲಾಖೆಯಲ್ಲಿ, ಸರ್ವೆ ಇಲಾಖೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕೊರತೆ ಇದನ್ನು ಪರಿಹರಿಸಬೇಕು ಎಂದ ಅವರು ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸಬೇಕು ಎಂದು ಒತ್ರಾಯಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಡಿಎಫ್ಒ ಅಂಥೋನಿ ಮರಿಯಪ್ಪ, ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ, ತಹಶೀಲ್ದಾರ್ ಜಿ.ಮಂಜುನಾಥ್, ವಿವಿಧ ಇಲಾಖೆಗಳ ಮತ್ತಿತರರು ಉಪಸ್ಥಿತರಿದ್ದರು.












