ಕೋಲ್ಕತ್ತ: ಹಾಲಿ ಚಾಂಪಿಯನ್ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ತಲುಪಲು ಭಾನುವಾರ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡದ ಎದುರು ಜಯಿಸಲೇಬೇಕಾಗಿದೆ.ಸೂಪರ್ 8ರ ಒಂದನೇ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ 4 ಅಂಕಗಳೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿದೆ. ಜಿಂಬಾಬ್ವೆ ಎರಡು ಪಂದ್ಯ ಸೋತು ಹೊರಬಿದ್ದಿದೆ. ಈ ಗುಂಪಿನಲ್ಲಿ ಈಗ
ಉಳಿದಿರುವ ಏಕೈಕ ಪಂದ್ಯದಲ್ಲಿ ಭಾರತ ಮತ್ತು ವಿಂಡೀಸ್ ಹಣಾಹಣಿ ನಡೆಸಲಿವೆ. ಉಭಯ ತಂಡಗಳೂ ತಲಾ ಎರಡು ಅಂಕ ಗಳಿಸಿವೆ. ಆದರೆ ವಿಂಡೀಸ್ ನೆಟ್ ರನ್ ರೇಟ್ ಭಾರತಕ್ಕಿಂತ ಹೆಚ್ಚು ಇದೆ. ಎರಡನೇ ಸ್ಥಾನದಲ್ಲಿದೆ.ಈ ಪಂದ್ಯದಲ್ಲಿ ಜಯಿಸುವ ತಂಡವು ಮಾರ್ಚ್ 5ರಂದು ಮುಂಬೈನಲ್ಲಿ ನಡೆಯುವ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವುದು.ಈ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ ತಂಡವು ಸೋತಿತ್ತು. ಎರಡನೇಯ ಹಣಾಹಣಿಯಲ್ಲಿ ಜಿಂಬಾಬ್ವೆ ಎದುರು ಸೂರ್ಯಕುಮಾರ್ ಯಾದವ್ ನಾಯಕತ್ವದ ಬಳಗದ ಬ್ಯಾಟಿಂಗ್ ಪಡೆಯು ಮಿಂಚಿತ್ತು. ಇಲ್ಲಿಯವರೆಗೆ ವೈಫಲ್ಯ ಅನುಭವಿಸಿದ್ದವರು ಲಯಕ್ಕೆ ಮರಳಿದರು.
ಸಂಜು ಸ್ಯಾಮ್ಸನ್ 24 ರನ್ ಗಳಿಸಿದರೂ ಅಭಿಷೇಕ್ ಶರ್ಮಾ ಜೊತೆಗೆ ಉತ್ತಮ ಆರಂಭ ನೀಡಿದರು. ಅಭಿಷೇಕ್ ಅರ್ಧಶತಕ ಗಳಿಸಿದ್ದು ಭಾರತ ತಂಡದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಟೂರ್ನಿಯುದ್ದಕ್ಕೂ ಅವರ ಬ್ಯಾಟ್ನಿಂದ ಹೆಚ್ಚು ರನ್ ಹರಿದಿರಲಿಲ್ಲ. ತಿಲಕ್ ವರ್ಮಾ 6ನೇ ಕ್ರಮಾಂಕದಲ್ಲಿ ಬಂದು ಉಪಯುಕ್ತ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು 4 ವಿಕೆಟ್ಗಳಿಗೆ 256 ರನ್ ಗಳಿಸಿತ್ತು. ಸೂರ್ಯ ಮತ್ತು ಹಾರ್ದಿಕ್ ಪಾಂಡ್ಯ ಅವರ ಆಟವೂ ರಂಗೇರಿತು. ಅದರಲ್ಲೂ ಹಾರ್ದಿಕ್ ಬೌಲಿಂಗ್ನಲ್ಲಿಯೂ ಮಿಂಚಿದರು.ಅಲ್ಲದೇ ಅರ್ಷದೀಪ್ ಸಿಂಗ್ ಅವರು ಜಸ್ಪ್ರೀತ್ ಬೂಮ್ರಾ ಅವರೊಂದಿಗೆ ವೇಗದ ವಿಭಾಗದ ಶಕ್ತಿಯಾಗಿದ್ದಾರೆ. ಆದರೆ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಬಗ್ಗೆಯೇ ತಂಡಕ್ಕೆ ಹೆಚ್ಚಿನ ಚಿಂತೆ ಇದೆ.ವಿಂಡೀಸ್ನ ಆಲ್ರೌಂಡರ್ ಜೇಸನ್ ಹೊಲ್ಡರ್ ಹಾಗೂ ರೊಮೆರಿಯೊ ಶೆಫರ್ಡ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ ಅಗ್ರಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದು ದಕ್ಷಿಣ ಆಫ್ರಿಕಾ ಎದುರು ವಿಂಡೀಸ್ ಸೋಲಿಗೆ ಕಾರಣವಾಗಿತ್ತು.
ಶಾಮರ್ ಜೋಸೆಫ್, ಗುಡಕೇಶ್ ಮೋತಿ, ರೊಮೆರಿಯೊ ಶೆಫರ್ಡ್ ಮತ್ತು ಮ್ಯಾಥ್ಯೂ ಫೋರ್ಡ್ ಅವರ ದಾಳಿಯನ್ನು ಎದುರಿಸಿ ನಿಲ್ಲುವ ಸವಾಲು ಆತಿಥೇಯ ಬ್ಯಾಟರ್ಗಳ ಮುಂದಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ, ಉಭಯ ತಂಡಗಳಿಗೆ ತಲಾ ಒಂದು ಅಂಕ ಹಂಚಲಾಗುತ್ತದೆ. ಆದರೆ ರನ್ರೇಟ್ನಲ್ಲಿ ವಿಂಡೀಸ್ ಮುಂದಿರುವುದರಿಂದ ಭಾರತ ಹೊರಬೀಳುವ ಸಾಧ್ಯತೆ ಇದೆ.








