ಸುಳ್ಯ:ಸುಳ್ಯ ನಗರದ ಕೆಲವು ಭಾಗಗಳಲ್ಲಿ ಜೂ.8 ರಂದು ಬೆಳಿಗ್ಗೆ ಹನಿ ಮಳೆ ಸುರಿಸಿ ವರುಣ ಮಾಯವಾಗಿದ್ದಾನೆ. ಇಂದು ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇತ್ತು. ಕೆಲ ಹೊತ್ತು ಹನಿ ಮಳೆಯಾಗಿದೆ. ಬಳಿಕ ಮೋಡ ಮರೆಯಾಗಿ ಬಿಸಿಲು ಬಂದಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇದ್ದು ಹನಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಮೋಡ, ಬಿಸಿಲು, ಮಳೆಯ ಕಣ್ಣಾ ಮುಚ್ಚಾಲೆ ಆಡುತ್ತಿದ್ದು ಮಳೆಯ ಕಣ್ಣಾ ಮುಚ್ಚಾಲೆ ಆಟ ಮುಂದುವರಿದಿದೆ. ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಉಂಟಾಗಿ ಮಳೆ
ಸುರಿಯಬಹುದು ಎಂದು ನಿರೀಕ್ಷೆ ಹುಟ್ಟಿಸಿದರೂ ಮಳೆ ಬರುತ್ತಿಲ್ಲ. ಹನಿ ಮಳೆ, ಜಿಟಿ ಜಿಟಿ ಮಳೆ ಅಸ್ಟೇ ಸುರಿದು ಮಳೆರಾಯ ಮರೆಯಾಗುತ್ತಿದ್ದಾನೆ. ಮುಂಗಾರು ಕೂಡ ಆರಂಭಗೊಂಡಿಲ್ಲ.ಮಳೆ ಇಲ್ಲದೆ ಹಲವು ಕಡೆಗಳಲ್ಲಿ ನೀರಿಗೆ ಆಹಾಕಾರ ಮುಂದುವರಿದಿದೆ.
ಈ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತದ ಅಬ್ಬರ ಹೆಚ್ಚಾಗುತ್ತಿದ್ದು, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಕಟ್ಟೆಚ್ಚರವಹಿಸಲು ಸೂಚನೆ ನೀಡಲಾಗಿದೆ, ಜೂನ್ 11 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇರಳ, ಲಕ್ಷ ದ್ವೀಪ, ಗೋವಾ, ಮಹಾರಾಷ್ಟ್ರದಲ್ಲೂ ಭಾರಿ ಮಳೆ ಸಂಭವವಿದೆ. ಬಿಪರ್ಜಾಯ್ ಚಂಡಮಾರುತ ಅಬ್ಬರದಿಂದ ಬಿರಗಾಳಿ ಸಹಿತ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಗಂಟೆಗೆ 115 ಕಿ.ಮೀ. ವೇಗದ ಬಿರುಗಾಳಿ ಸಾಧ್ಯತೆ ಇದೆ. ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ, ವಿಜಯನಗರದಲ್ಲಿ ಮಳೆಯಾಗಲಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.