ಸುಳ್ಯ: ಬಾಂಬೆ ಮಿಠಾಯಿ ಹಾಗೂ ವಿವಿಧ ಬಗೆಯ ಬಣ್ಣ ಬಳಸಿ ತಯಾರಿಸಲಾಗುವ ಗೋಬಿ ಮಂಚೂರಿ ಮಾದರಿಯ ಪರೀಕ್ಷಾ ವರದಿ ಬಂದಿದ್ದು ವರದಿಯ ಕುರಿತು ಸೋಮವಾರ ಮಾಹಿತಿ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ
ಸಚಿವರು ಗೋಬಿ ಮಂಚೂರಿ ಹಾಗೂ ಬಾಂಬೆ ಮಿಠಾಯಿ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿಯನ್ನು ಪರಿಶೀಲಿಸಿ ವರದಿಯ ಕುರಿತು ಮತ್ತು ಆ ಬಗ್ಗೆ ಏನು ಕ್ರಮ ತೆಗೆದುಕೊಳ್ಳುವುದು ಎಂಬುದರ ಬಗ್ಗೆ ಸೋಮವಾರ ತಿಳಿಸುತ್ತೇನೆ ಎಂದು ತಿಳಿಸಿದರು.
ಕರ್ನಾಟಕದ ಆಹಾರ ಸುರಕ್ಷತೆ ಆಯುಕ್ತಾಲಯ ಬಾಂಬೆ ಮಿಠಾಯಿ ಹಾಗೂ ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ,ಪ್ರಯೋಗಾಲಯಗಳಿಗೆ ಕಳುಹಿಸಿತ್ತು.ಇದೀಗ ಅದರ ವರದಿ ಬಂದಿದೆ.
ಕುಕ್ಕೆ ಸುಬ್ರಹ್ಮದಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು.









