*ಎಂ.ನಾ. ಚಂಬಲ್ತಿಮಾರ್.
ಸುಳ್ಯದ ಪತ್ರಕರ್ತರು ನಿಜಕ್ಕೂ ಕಾರ್ಯಮರೆತವರಲ್ಲ, ಅವರು ಸರಕಾರಿ ದೇಣಿಗೆಗೆ ಕೈಚಾಚದೇ ಪೇಟೆಯ ಹೃದಯಭಾಗದಲ್ಲೇ ನಿರ್ಮಿಸುತ್ತಿದ್ದಾರೆ ಒಂದು ಕೋಟಿ ರೂ. ವೆಚ್ಚದ ಪತ್ರಿಕಾ ಭವನ! ಮೊನ್ನೆ ಮೊನ್ನೆ ಸುಳ್ಯದ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಲೆಂದು ಹೋಗಿದ್ದೆ. ಮಧ್ಯಾಹ್ನ ಊಟ ಮುಗಿಸಿ ಪತ್ರಕರ್ತ ಗೆಳೆಯರನ್ನು ಬೀಳ್ಕೊಟ್ಟು ಹೋಟೆಲಿಂದ ಹೊರಗೆ ಕಾಲಿಡುವಷ್ಟರಲ್ಲೇ “ದಿ ಸುಳ್ಯ ಮಿರರ್” ಸಂಪಾದಕ, ಗೆಳೆಯ ಗಂಗಾಧರ ಕಲ್ಲಪ್ಪಳ್ಳಿ ಹೇಳಿದ “ಸರ್ ನೀವು ಮರಳುವ ಮುನ್ನ ಒಮ್ಮೆ ನಮ್ಮ ನಿರ್ಮಾಣ ಹಂತದಲ್ಲಿರುವ ಪತ್ರಿಕಾ

ಭವನ ನೋಡಿ ಹೋಗಿ.., ಬನ್ನಿ..” ಎಂದು ನಾನೂ ಸಹಿತ ಪತ್ರಿಕಾದಿನಾಚರಣೆಯಲ್ಲಿ ಸನ್ಮಾನಿತಳಾದ ಹಿರಿಯ ಪತ್ರಕರ್ತೆ, ಅಂಕಣಗಾರ್ತಿ ಚಂದ್ರಾವತಿ ಬಡ್ಡಡ್ಕಳನ್ನು ಕರೆದೊಯ್ದರು.
ನೋಡುತ್ತೇನೆ ನನಗೇ ಅಚ್ಚರಿ..!
ಅದು ಸುಳ್ಯದ ಹೃದಯ ಭಾಗ. ತಾ.ಪಂ ಒದಗಿಸಿದ ಐದು ಸೆಂಟ್ಸ್ ಜಾಗದಲ್ಲಿ ಒಂದಿಂಚು ಸ್ಥಳವೂ ಉಪಯೋಗ ಶೂನ್ಯವಾಗದಂತೆ ಎರಡು ಮಹಡಿಯ ವ್ಯವಸ್ಥಿತ ಪತ್ರಿಕಾ ಭವನವೊಂದು ಅರಳುತ್ತಿದೆ. ಇದರ ವೈಶಿಷ್ಟ್ಯ ಏನಂದ್ರೆ ಈ ಕಟ್ಟಡಕ್ಕಾಗಿ ಪತ್ರಕರ್ತರು ಸರಕಾರದ ಅನುದಾನ ಪಡೆದಿಲ್ಲ. ಬದಲಿಗೆ ಸುಳ್ಯ ತಾಲೂಕಿನ ನಾಗರಿಕ ದಾನಿಗಳ ಆರ್ಥಿಕ ಸಹಾಯದಿಂದಲೇ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಅರ್ಧಾಂಶ ಕಾಮಗಾರಿ ನಡೆದಿದ್ದು, ಪತ್ರಕರ್ತರು ಸಾಂಘಿಕವಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದಿಂದ ಗಣ್ಯರ ಮನೆಬಾಗಿಲು ತಟ್ಟುತ್ತಿದ್ದಾರೆ. ಆದರೆ ಕೊರೋನೋತ್ತರದ ಸಂಕಟದ ಕಾಲವನ್ನು ದಾಟುತ್ತಿರುವ ವೇಳೆಯಲ್ಲೂ ಯಾರೊಬ್ಬರೂ ಸುಳ್ಯದ ಪತ್ರಕರ್ತರನ್ನು ನಿರಾಶೆಗೊಳಿಸಿದ್ದಿಲ್ಲ ಎನ್ನುವುದೇ ಗಮನೀಯ.
ಸುಳ್ಯದಲ್ಲಿ ಪತ್ರಕರ್ತರಿಗೆ ಎರಡು ಸಂಘಟನೆಗಳಿವೆ. ಆದರೆ ತಮಗೊಂದು ಪ್ರೆಸ್ ಕ್ಲಬ್ ಬೇಕೆನ್ನುವುದರಲ್ಲಿ ಅವರದ್ದು ಐಕ್ಯತೆಯ ನಿಲುವು, ಸಾಂಘಿಕ ಪ್ರಯತ್ನ. ಅದು ಬೇಗನೇ ಅಸ್ತಿತ್ವಕ್ಕೆ ಬರಬೇಕೆಂಬ ಕಾಳಜಿಯಿಂದ ಅವರು ನಿಷ್ಠೆಯ ಕಾರ್ಯನಿರತರು. ಸುಳ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದು 23 ವರ್ಷಗಳಾಯಿತು. ಇನ್ನೊಂದು ವರ್ಷ ದಾಟಿದರೆ ಸಂಘಕ್ಕೆ ರಜತ ಸಂಭ್ರಮ. ಆ ಹೊತ್ತಿಗಾಗಲೇ ನೂತನ ಪತ್ರಿಕಾ ಭವನ ತಲೆ ಎತ್ತಬೇಕು ಎನ್ನುವುದು ಪತ್ರಕರ್ತರ ಸದಾಶಯ. ಈ ನಿಟ್ಟಿನಲ್ಲವರು ಸೃಜನಶೀಲರು, ಚಲನಶೀಲರು.

ಮೊನ್ನೆ ಪತ್ರಿಕಾದಿನಾಚರಣೆಯಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರೀ ಧುರೀಣ, ಸಾಂಸ್ಕೃತಿಕ ಕಳಕಳಿಯುಳ್ಳ ಆತ್ಮೀಯರಾದ ಸವಣೂರು ಸೀತಾರಾಮ ರೈಗಳ ಬಳಿಯಲ್ಲೇ ನಾನೂ ವೇದಿಕೆ ಹಂಚಿಕೊಂಡಿದ್ದೆ. ವೇದಿಕೆಯಲ್ಲಿ ಕಲಾಪ ನಡೆಯುತ್ತಿದ್ದಂತೆಯೇ ನಾವು ಪರಸ್ಪರಮಾತಾಡಿಕೊಳ್ಳುತ್ತಿದ್ದೆವು. ಆಗವರಂದರು”ಸುಳ್ಯದ ಪತ್ರಕರ್ತರು ಜಗಳಗಂಟರಲ್ಲ, ಪೀಡಕರೂ ಅಲ್ಲ. ಅವರು ಸಮಾಜಮುಖಿ ಕಳಕಳಿಯವರು. ಪ್ರೆಸ್ ಕ್ಲಬ್ ನಿರ್ಮಾಣಕ್ಕಾಗಿ ಸಾಂಘಿಕ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ಅದನ್ನು ನೋಡುವಾಗ ಖುಷಿಯಾಗುತ್ತದೆ” ಎಂದರು. ನನಗೂ ಖುಷಿಯಾಯಿತು. ಪತ್ರಕರ್ತರು ಸಮಾಜದಿಂದ ಪ್ರೀತಿಸಲ್ಪಡಬೇಕು, ಧ್ವೇಷಿಸಲ್ಪಡಬಾರದು. ಈ ಪ್ರೀತಿಯ ಬಾಂಧವ್ಯ ಆರೋಗ್ಯಕರವಾಗಿದ್ದರೆ ಪತ್ರಕರ್ತರನ್ನು ಸಮಾಜ ಕೈ ಬಿಡದು. ಈ ಸಹೃದಯ ಸಂಬಂಧ ಚೆನ್ನಾಗಿರುವುದರಿಂದಲೇ ಸುಳ್ಯದ ಪತ್ರಕರ್ತರು ಬಾಗಿಲು ತಟ್ಟಿದ ಮನೆಗಳಿಂದ ಬರಿಗೈಯ್ಯಲ್ಲಿ ಬಂದಿಲ್ಲ.ಇಷ್ಟಕ್ಕೂ ಇವರು ಬಾಗಿಲು ತಟ್ಟುವುದು, ಗಣ್ಯ, ಧುರೀಣ, ಉದ್ಯಮಿಗಳಿಗೆ ಮನವಿ ನೀಡಿ ನಮಸ್ಕರಿಸುವುದು ತಮ್ಮ ವೈಯ್ಯಕ್ತಿಕ ವಿಷಯಕ್ಕಲ್ಲ. ಸುಳ್ಯ ಬೆಳೆಯುತ್ತಿರುವ ಪೇಟೆ. ಎಲ್ಲಾ ನಗರಗಳಲ್ಲಿರುವಂತೆ ಸುಳ್ಯಕ್ಕೂ ನಗರದ ಛಾಯೆ ಬಂದಿದೆ. ವರ್ತಮಾನದಲ್ಲಿ ಮಾಧ್ಯಮಗಳು ವಿಫುಲವಾಗಿ ಬೆಳೆಯುತ್ತಿರುವುದರಿಂದ ಅದನ್ನು ಪ್ರತಿನಿಧೀಕರಿಸುವವರಿಗೆ ಸುವ್ಯವಸ್ಥಿತ ಆಸ್ಥಾನ ಅಗತ್ಯ. ಜನತೆಗೆ ಮಾಧ್ಯಮದವರೆಲ್ಲರನ್ನು ಭೇಟಿಯಾಗಲು, ಸುದ್ದಿಗೋಷ್ಠಿ ನಡೆಸಲು, ಮಾಧ್ಯಮದವರೊಡನೆ ವಿಚಾರ ಹಂಚಲು ಸಮಾಜಕ್ಕೂ ಪತ್ರಿಕಾಭವನ ಅತ್ಯಗತ್ಯ. ವ್ಯವಸ್ಥಿತ ಪ್ರೆಸ್ ಕ್ಲಬ್ ಇಲ್ಲದಿರುವುದು ಪತ್ರಕರ್ತರ ಸಂಘದ ಕೊರತೆಯಷ್ಟೇ ಅಲ್ಲ, ಅದು ನಾಡಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಲಯದ ಕೊರತೆಯೂ ಹೌದು. ಏಕೆಂದರೆ ಮಾಧ್ಯಮಗಳಿರುವುದು ಜನತೆಗಾಗಿ. ಅದು ಜನರಿಂದಲೇ ಬೆಳೆದ, ಬೆಳೆಯಬೇಕಾದ ಸಂಸ್ಥೆ. ಜತೆಗೆ ಪತ್ರಿಕಾಭವನ ಎಂದರೆ ಅದು ಪತ್ರಕರ್ತರಿಗಷ್ಟೇ ಅಲ್ಲ, ಅದು ನಾಗರಿಕರ ಮಾಧ್ಯಮ ಸಂಪರ್ಕದ ತಾಣ. ಸಾಂಸ್ಕೃತಿಕ, ಸಾಹಿತ್ಯ, ಕಲಾವಲಯದ ಸೃಜನಶೀಲ ಚಟುವಟಿಕೆಗಳ ವೇದಿಕೆಯೂ ಹೌದು.

ಇಂಥದ್ದೊಂದು ತಾಣ ಬೆಳೆಯುವ ಸುಳ್ಯದ ಅಭಿವೃದ್ಧಿಯ ನೆತ್ತಿಯ ಸಿಂಧೂರದಂತೆ ಅರಳುತ್ತಿದೆ. ಕೊರೋನೋತ್ತರ ಕಾಲದಲ್ಲಿ ಇಂಥದ್ದೊಂದು ಸಾಹಸಕ್ಕಿಳಿದ ಪತ್ರಕರ್ತರದ್ದು ನಿಜಕ್ಕೂ ಸಾಧನೆ. ಈ ಸಾಧನೆಯ ಪಯಣಕ್ಕೆ ಅವರೊಳಗಿನ ಆತ್ಮವಿಶ್ವಾಸ ಏನೆಂದ್ರೆ ಸಾಮಾಜಿಕರೊಡನೆ ಇರುವ ಸಾಮರಸ್ಯದ ಸಂಬಂಧ. ಕಳೆದ ಅನೇಕ ವರ್ಷಗಳಿಂದ ಸುಳ್ಯದ ಪ್ರಗತಿಯಲ್ಲಿ, ಸೂರ್ಲಯದ ಸಾಮಾಜಿಕ ಸಾಂಸ್ಕೃತಿಕ ಬದುಕಿನ ಆಶೋತ್ತರಗಳಿಗೆ ಪತ್ರಿಕೆಗಳು, ಪತ್ರಕರ್ತರು ನೀಡಿದ ಕೊಡುಗೆ ಚಿಕ್ಕದೇನಲ್ಲ. ಒಂದು ನಾಡಿನ ಇತಿಹಾಸ ಅರಿಯಬೇಕಿದ್ದರೆ ಮಹದ್ಗ್ರಂಥ ಹುಡುಕಬೇಕಾದ ಅಗತ್ಯವೇನಿಲ್ಲ. ಆ ನಾಡಿನ ದಿನಪತ್ರಿಕೆಗಳ ಕಂತೆಯನ್ನು ಹುಡುಕಿದರೆ ಸಾಕು. ಅದರೊಳಗೆ ಅಕ್ಷರದಲ್ಲಿ ಮುದ್ರಿತವಾಗಿ ಜನರ ಇತಿಹಾಸ ಮಲಗಿದೆ. ಇಂಥ ಜನರ ಇತಿಹಾಸ ಬರೆದವರೇ ಪತ್ರಕರ್ತರು. ಅಂಥ ಪತ್ರಕರ್ತರಿಗೆ ಒಂದು ಭವನ ನಿರ್ಮಾಣವಾಗುವಾಗ ಜನರು ಕೈ ಬಿಡುವರೇ…?

(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು. ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)