ಅರಂತೋಡು:ಅರಂತೋಡು ತೆಕ್ಕಿಲ್ ಎಚ್.ಪಿ. ಗ್ಯಾಸ್ ವಿತರಣಾ ಸಂಸ್ಥೆ ವತಿಯಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ವಿತರಣಾ ಸಮಾರಂಭವು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನಸಹಕಾರಿ ಸಂಘದ ಸಿರಿಸೌಧ ಸಭಾಂಗಣದಲ್ಲಿ ಡಿ.19 ರಂದು ನಡೆಯಿತು. ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಚಾಲನೆ ನೀಡಿ ಮಾತನಾಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ದೇಶದಲ್ಲಿ 9 ಕೋಟಿಗಿಂತಲೂ ಅಧಿಕ ಮಹಿಳೆಯರಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಸಂಪರ್ಕವನ್ನು ನೀಡಿದ್ದಾರೆ, ಅವರ ದೂರದ್ರಷ್ಟಿಯಿಂದ ಕೇಂದ್ರದಿಂದ ಬರುವ ಒಂದು ಪೈಸೆಯಾದರು ನೇರವಾಗಿ ಫಲಾನುಭವಿಗಳ ಖಾತೆಗೆ ಬೀಳುತ್ತದೆ ಎಂದರು. ಮುಖ್ಯ ಅತಿಥಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಮಾತನಾಡಿ ಸರಕಾರದಿಂದ ಸಿಗುವ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಿಲ್ ಎಚ್.ಪಿ ಗ್ಯಾಸ್ ಏಜೆನ್ಸಿ ಮಾಲಕ ಟಿ.ಎಂ. ಶಹೀದ್ ತೆಕ್ಕಿಲ್ ವಹಿಸಿ ಮಾತನಾಡಿ ಗ್ಯಾಸ್ ಸಂಪರ್ಕದಿಂದ ಮಹಿಳೆಯರು ಆರೋಗ್ಯವಂತರಾಗುತ್ತಾರೆ ಮತ್ತು ಯಾವುದೇ ಯೋಜನೆಗಳು, ಸರಕಾರದ ಸವಲತ್ತುಗಳು, ಕಟ್ಟಕಡೆಯ ಹಾಗೂ ಅರ್ಹ ಫಲಾನುಭವಿಗಳಿಗೆ ದೊರಕಬೇಕೆಂದರು.
ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್,
ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿಮೇಲು, ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷ ತೀರ್ಥರಾಮ ಮಾತನಾಡಿದರು.
ವೇದಿಕೆಯಲ್ಲಿ ಪೇರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ, ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು, ಅರಂತೋಡು ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕಾರ್, ಶರೀಫ್ ಕಂಠಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಉಪಾಧ್ಯಕ್ಷ ಹನೀಫ್ ಎಸ್.ಕೆ ಸಂಪಾಜೆ, ಗ್ರಾಮ ಪಂಚಾಯತ್ ಸದಸ್ಯೆ ವಿಮಲಾ ಪ್ರಸಾದ್, ಸಿದ್ಧಿಕ್ ಕೊಕ್ಕೊ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯ್ಕ್, ಉಧ್ಯಮಿ ಸಲೀಮ್ ಪೆರಂಗೋಡಿ ಮೊದಲಾದವರು ಉಪಸ್ಥಿತರಿದ್ದರು.
ತೆಕ್ಕಿಲ್ ಹೆಚ್.ಪಿ ಗ್ಯಾಸ್ ನ ಅಶ್ರಫ್ ಗುಂಡಿ ಸ್ವಾಗತಿಸಿದರು. ವ್ಯವಸ್ಥಾಪಕ ಧನುರಾಜ್ ಊರುಪಂಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಂದ್ಯಾ ಕಿರ್ಲಾಯ ವಂಧಿಸಿದರು. ಕಾರ್ಯಕ್ರಮದಲ್ಲಿ 126 ಮಂದಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಂಪರ್ಕವನ್ನು ವಿತರಿಸಲಾಯಿತು.














