ಸುಳ್ಯ: ಸುಳ್ಯ – ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮಾ.14 ರಂದು ನಗರ ಪಂಚಾಯತ್ ಸುಳ್ಯ ಎದುರಿನಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ರಸ್ತೆ ಅಭಿವೃದ್ಧಿಗೆ ಹೋರಾಟ ನಡೆಸುತ್ತಿರುವ ಆ ಭಾಗದ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುಳ್ಯ ನಗರದ ಜಟ್ಟಿಪಳ್ಳ ಕ್ರಾಸ್ ಬಳಿ ಜಮಾಯಿಸಿದ ಸಾರ್ವಜನಿಕರು ಜಾಥಾ ಮೂಲಕ ಆಗಮಿಸಿ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ

ರಸ್ತೆಗಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಮುಖರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸುಳ್ಯ -ಕೊಡಿಯಾಲಬೈಲ್ -ದುಗ್ಗಲಡ್ಕ ಏಳು ಕಿಲೋಮೀಟರ್ ಉದ್ದವಿರುವ ರಸ್ತೆ ಬೆಳೆಯುತ್ತಿರುವ ಸುಳ್ಯಕ್ಕೆ ಅತ್ಯಂತ ಅವಶ್ಯಕವಾದ ರಸ್ತೆ ಯಾಗಿದೆ. ಈ ರಸ್ತೆಯ ಅಭಿವೃದ್ಧಿಗೆ 25 ವರ್ಷಗಳಿಂದ ಬೇಡಿಕೆ ಇದೆ. ಆದರೆ ಜನಪ್ರತಿನಿಧಿಗಳು, ಸರಕಾರ ನೀಡಿದ ಭರವಸೆಗಳು ಸುಳ್ಳಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಬಳಿಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಪ್ರಮುಖರು ತಿಳಿಸಿದ್ದಾರೆ.

ಸುಳ್ಯಕ್ಕೆ ಅನುದಾನ ಆನೆ ಮಾತ್ರ ಬರುವುದು-ಅನುದಾನ ಬರುತ್ತಿಲ್ಲ;
ಪ್ರತಿಭಟನೆಯಲ್ಲಿ ಮಾತನಾಡಿದ ಉದ್ಯಮಿ ಸುರೇಶ್ಚಂದ್ರ ಕಮಿಲ ‘ಬೇರೆ ವಿಧಾನ ಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಬರುತ್ತಿದ್ದರೆ, ಸುಳ್ಯಕ್ಕೆ ಮಾತ್ರ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ, ಇಲ್ಲಿ ಜನರ ನಿದ್ದೆಗೆಡಿಸಲು ಆನೆ ಮಾತ್ರ ಬರುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಕೆಲಸ ಮಾಡಿದವರಿಗೆ ಮಾತ್ರ ಓಟು ಹಾಕುವುಸು ಎಂದು ಅವರು ಹೇಳಿದರು.
ಚಾರ್ಡರ್ಡ್ ಅಕೌಂಟೆಂಟ್ ಪಿ.ಗಣೇಶ್ ಭಟ್ ಮಾತನಾಡಿ ‘ ಆಡಳಿತ ವ್ಯವಸ್ಥೆ ನಿಷ್ಕ್ರೀಯವಾದಾಗ ಜನರು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದರು. ಸುಳ್ಯ ಶಾಸಕರು ಸಚಿವರಾದಾಗ ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಸ್ತೆ ಅಭಿವೃದ್ಧಿ ಆಗದೇ ಇರುವುದು ದುರದೃಷ್ಠಕರ ಎಂದು ಹೇಳಿದರು.

ಸೀತಾನಂದ ಬೇರ್ಪಡ್ಕ ಮಾತನಾಡಿ’ ರಸ್ತೆ ಅಭಿವೃದ್ಧಿ ಸಂಪೂರ್ಣ ಆಗದೆ ಯಾವುದೇ ಕಾರಣಕ್ಕೂ ವಿರಮಿಸುವುದಿಲ್ಲ, ಪೂರ್ತಿ ರಸ್ತೆ ಅಭಿವೃದ್ಧಿ ಆಗುವ ತನಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ದಿನೇಶ್ ಮಡಪ್ಪಾಡಿ ಮಾತನಾಡಿ’ ಸುಳ್ಯದ ಅಭಿವೃದ್ದೀಗೆ ಸುಳ್ಯ-ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಅತೀ ಅಗತ್ಯವಾಗಿದೆ ಎಂದು ಹೇಳಿದರು.
ಬಾಲಕೃಷ್ಣನ್ ನಾಯರ್ ನೀರಬಿದಿರೆ ಮಾತನಾಡಿ’ ಇಷ್ಟು ವರ್ಷದಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದರೂ ನಮ್ಮ ಬಹು ಬೇಡಿಕೆಯಾದ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸದೇ ಇರುವುದು ನಮಗೆ ಬಹಳ ಬೇಸರ ತಂದಿದೆ ಎಂದು ಹೇಳಿದರು. ದುಗ್ಗಲಡ್ಕ ಕೊಡಿಯಾಲಬೈಲ್ ರಸ್ತೆ ಅಭಿವೃದ್ಧಿಗೆ ಪದೇ ಪದೇ ಗುದ್ದಲಿ ಪೂಜೆ ಮಾಡುತ್ತಾರೆ. ಗುದ್ದಲಿ ಪೂಜೆ ನೆರವೇರಿಸಿರುವುದರಲ್ಲಿ ಈ ರಸ್ತೆ ಬಹುಷಃ ಗಿನ್ನೆಸ್ ದಾಖಲೆ ಆಗಬಹುದು ಎಂದು ಟಾಂಗ್ ನೀಡಿದರು

ಸುರೇಶ್ ಎಂ.ಎಚ್.ಮಾತನಾಡಿದರು.ಪ್ರಮುಖರಾದ ಡಾ.ಗಣೇಶ್ ಭಟ್, ಡಾ.ರಘುರಾಮ, ನಟರಾಜ ಶರ್ಮ, ಕುಶ ನೀರಬಿದಿರೆ, ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾ ಕುಮಾರಿ, ಮನೋಜ್ ಪಾನತ್ತಿಲ, ರಾಧಾಕೃಷ್ಣ ಬೇರ್ಪಡ್ಕ, ಗಿರೀಶ್ ಪಾಲಡ್ಕ, ಖಲಂದರ್ ಎಲಿಮಲೆ, ಜಯಪ್ರಕಾಶ್ ಕೊಡಿಯಾಲಬೈಲು, ಶಿವರಾಮ ಎಂ.ಪಿ, ಡಾ.ಅಶೋಕ್, ಶಂಬಯ್ಯ ಪಾರೆ, ಮಧುಕಿರಣ್, ಭವಾನಿಶಂಕರ ಕಲ್ಮಡ್ಕ, ಶಿಹಾಬ್ ಜಟ್ಟಿಪಳ್ಳ, ಬಾಲಚಂದ್ರ, ಮೋಹನ್ ಬೇರ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.

ಕೇಸರಿ- ಹಸಿರು ಸಾಲು ಹಾಕಿ ಪ್ರತಿಭಟನೆ:
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹುತೇಕ ಮಂದಿ ಕೇಸರಿ ಶಾಲು ಹಾಕಿ ಆಗಮಿಸಿದ್ದರೆ, ಕೆಲವರು ಹಸಿರು ಶಾಲು ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಮಹಿಳೆಯರೂ ಸೇರಿ ಸುಡು ಬಿಸಿಲನ್ನೂ ಲೆಕ್ಕಿಸದೇ 250 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.