ಶ್ರೀಹರಿಕೋಟಾ: ಚಂದ್ರನ ಮೇಲ್ಮೈ ಮೇಲೆ ಗಗನನೌಕೆ ಇಳಿಸಿ, ಅಧ್ಯಯನ ಕೈಗೊಳ್ಳುವ ಉದ್ದೇಶದ ‘ಚಂದ್ರಯಾನ–3’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀಹರಿ ಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ‘ಚಂದ್ರಯಾನ–3’ ಗಗನ ನೌಕೆಯನ್ನು ಹೊತ್ತ ರಾಕೆಟ್ ನಭದತ್ತ ಚಿಮ್ಮಲು ಸನ್ನದ್ಧವಾಗಿದೆ. ಲ್ಯಾಂಡರ್ (ವಿಕ್ರಮ್) ಹಾಗೂ
ರೋವರ್ (ಪ್ರಜ್ಞಾನ) ಹೊತ್ತ ರಾಕೆಟ್ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಭಕ್ಕೆ ಚಿಮ್ಮಲಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳು, ತಂತ್ರಜ್ಞರ ತಂಡ ಸಿದ್ಧತೆಯನ್ನು ಪೂರ್ಣಗೊಳಿಸಿದೆ. 2019ರಲ್ಲಿ ಕೈಗೊಂಡಿದ್ದ ‘ಚಂದ್ರಯಾನ–2’ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಹಾಗಾಗಿ, ಈ ಬಾರಿ ವಿಜ್ಞಾನಿಗಳು ‘ಸಾಫ್ಟ್ ಲ್ಯಾಂಡಿಂಗ್’ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ. ಲ್ಯಾಂಡರ್ಗೆ ಯಾವುದೇ ರೀತಿಯ ಹಾನಿ ಆಗದಂತೆ, ಅದನ್ನು ಚಂದ್ರನ ಮೇಲೆ ಇಳಿಸುವುದನ್ನು ‘ಸಾಫ್ಟ್ ಲ್ಯಾಂಡಿಂಗ್’ ಎಂದು ಕರೆಯುತ್ತಾರೆ. ವಿಜ್ಞಾನಿಗಳು ಇಂಥ ಕೌಶಲವನ್ನು ಕರಗತ ಮಾಡಿಕೊಳ್ಳುವ ಗುರಿ ಹೊಂದಿದ್ದಾರೆ‘ಚಂದ್ರಯಾನ–2’ ಕಾರ್ಯಕ್ರಮದ ವೇಳೆ, ಆರ್ಬಿಟರ್ನಿಂದ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಚಂದ್ರನಿಂದ 100 ಕಿ.ಮೀ. ಅಂತರದಲ್ಲಿ ಲ್ಯಾಂಡರ್ ಯಶಸ್ವಿಯಾಗಿ ಪರಿಭ್ರಮಿಸಿತ್ತು. ಪೂರ್ವನಿಗದಿಯಂತೆ ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ. ಅಂತರದ
ವರೆಗೆ ಇಳಿದಿದ್ದ ಲ್ಯಾಂಡರ್ ನಂತರ ಅಪ್ಪಳಿಸಿತ್ತು. ವಿಜ್ಞಾನಿಗಳಿಗೆ ಅದರ ಸಂಪರ್ಕವೂ ಕಡಿದು ಹೋಗಿತ್ತು. ‘ಸಾಫ್ಟ್ ಲ್ಯಾಂಡಿಂಗ್’ನಲ್ಲಿ ಯಶಸ್ಸು ಸಿಕ್ಕಲ್ಲಿ, ಭಾರತವು ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಅಮೆರಿಕ, ಚೀನಾ ಹಾಗೂ ಈ ಹಿಂದಿನ ಸೋವಿಯತ್ ಒಕ್ಕೂಟ ಈ ಸಾಧನೆ ಮಾಡಿರುವ ದೇಶಗಳಾಗಿವೆ. ಭಾರತದ ‘ಚಂದ್ರಯಾನ’ ಕಾರ್ಯಕ್ರಮಕ್ಕೆ ಎರಡು ದಶಕಗಳು ಸಂದಿವೆ. ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದ ಮೊದಲ 2008ರ ಅಕ್ಟೋಬರ್ 22ರಂದು ಇಸ್ರೊದ‘ಪಿಎಸ್ಎಲ್ವಿ–ಸಿ11’ ರಾಕೆಟ್ ವ್ಯೋಮದತ್ತ ಹಾರಿತ್ತು. 11 ವೈಜ್ಞಾನಿಕ ಸಾಧನಗಳನ್ನು ಈ ಗಗನನೌಕೆಯಲ್ಲಿ ಅಳವಡಿಸಲಾಗಿತ್ತು. ಚಂದ್ರನಿಂದ 100 ಕಿ.ಮೀ. ಅಂತರದಲ್ಲಿ ಪರಿಭ್ರಮಣೆ ಮಾಡಿತ್ತು. ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆ ಅಲ್ಲಿರಬಹುದಾದ ಖನಿಜಗಳ ಕುರಿತ ಅಧ್ಯಯನ ನಡೆಸುವುದು ಮೊದಲ ಚಂದ್ರಯಾನದ ಉದ್ದೇಶವಾಗಿತ್ತು. ‘ಚಂದ್ರಯಾನ–2’ ಕಾರ್ಯಕ್ರಮದ ಭಾಗವಾಗಿ 2019ರ ಜುಲೈ 22ರಂದು ಉಡಾವಣೆ ಮಾಡಲಾಗಿದ್ದ ಗಗನನೌಕೆ. ಆಗಸ್ಟ್ 20ರಂದು ಚಂದ್ರನ ಕಕ್ಷೆ ಸೇರಿತ್ತು.