ಸುಳ್ಯ: ಸಂಪೂರ್ಣ ಹದಗೆಟ್ಟು ನಡೆದಾಡಲೂ ಅಸಾಧ್ಯವಾದ ಚೆನ್ನಕೇಶವ ದೇವಸ್ಥಾನದ ರಸ್ತೆಯಲ್ಲಿ ಜನಪ್ರತಿನಿಧಿಗಳು ಭೇಟಿ ನೀಡಿ ಸೂಚನೆ ನೀಡಿದ ಹಿನ್ನಲೆಯಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿದೆ.
ಕಾಂಕ್ರೀಟ್, ಜಲ್ಲಿ ಮಿಕ್ಸರ್ ಹಾಕಿ ಹೊಂಡ ಮುಚ್ಚಲಾಗಿದೆ.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಡಾ ಅಧ್ಯಕ್ಷ ಕೆ.ಎಂ.ಮುಸ್ತಫ ನಗರ ಪಂಚಾಯತ್ ಸದಸ್ಯರಾದ

ಕಿಶೋರಿ ಶೇಟ್, ರಿಯಾಝ್ ಕಟ್ಟೆಕ್ಕಾರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಪರಿಶೀಲನೆ ನಡೆಸಿದರು. ಇವರು ಸೂಚಿಸಿದ ಹಿನ್ನಲೆಯಲ್ಲಿ ತಾತ್ಕಾಲಿಕ ದುರಸ್ತಿ ಮಾಡಲಾಯಿತು. ರಸ್ತೆ ಬದಿಯಲ್ಲಿ ತುಂಬಾ ಕೆಸರು ತುಂಬಿದ ಸ್ಥಳದಲ್ಲಿ ಎರಡು ದಿನದಲ್ಲಿ ಕಾಂಕ್ರೀಟ್ ಮಾಡಬೇಕು ಎಂದು ಅಧ್ಯಕ್ಷೆ ಶಶಿಕಲಾ ಅವರು ಸೂಚನೆ ನೀಡಿದರು.ಮುಂದಿನ 2-3 ದಿನಗಳಲ್ಲಿ ಅವಶ್ಯಕ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸಿ, ಒಂದು ವಾರದೊಳಗೆ ಸಂಪೂರ್ಣ ರಸ್ತೆ ಸುಸ್ಥಿತಿಗೆ ತರುವಂತೆ ಅವರು ಸೂಚನೆ ನೀಡಿದರು. ರಸ್ತೆ ಸ್ಥಿತಿಯ ಬಗ್ಗೆ ‘ಸುಳ್ಯ ಮಿರರ್’ ಸೇರಿದಂತೆ ಡಿಜಿಟಲ್ ಮೀಡಿಯಾಗಳಲ್ಲಿ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಪರಿಶೀಲನೆ ನಡೆಸಿ ದುರಸ್ತಿ ಮಾಡಿಸಿದರು.














