ಸುಳ್ಯ: ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿಎ ಬ್ಯಾಂಕ್) ಸುಳ್ಯ ಇದರ ಮಹಾಸಭೆಯು ಅಧ್ಯಕ್ಷ ವಿಕ್ರಂ ಎ.ವಿ. ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.111 ವರ್ಷಗಳ ಇತಿಹಾಸ ಹೊಂದಿರುವ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 12 ಡಿವಿಡೆಂಟ್ ವಿತರಿಸುವುದಾಗಿ ಘೋಷಿಸಿದರು. ಸಂಘದಲ್ಲಿ 326 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ. 1.52 ಕೋಟಿ ಲಾಭ ಗಳಿಸಿದೆ ಎಂದು
ತಿಳಿಸಿದರು.ಸಂಘದಲ್ಲಿ ಈ ವರ್ಷ ಉತ್ತಮವಾದ ವ್ಯವಹಾರ ನಡೆಸಿದ್ದು ಅಲ್ಲದೇ ಸಂಘದ ಸದಸ್ಯ ರೈತರಿಗೆ ಕೇವಲ 1 ರೂ. ಬಡ್ಡಿದರದಲ್ಲಿ 3 ತಿಂಗಳ ಕಾಲಕ್ಕೆ ರಸಗೊಬ್ಬರ ಸಾಲ ವಿತರಿಸಲಾಗುವುದು ಅಲ್ಲದೇ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೃಷಿಕರ ಓವರ್ ಡ್ರಾಫ್ಟ್ ಸಾಲದ ಯೋಜನೆ ರೂಪಿಸಿರುವುದಾಗಿ ಘೋಷಿಸಿದರು. ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ಬಾಧಿತರಾದ ಸಂಘದ ರೈತರಿಗೆ ಉಚಿತವಾಗಿ ಕಾಫಿ ಗಿಡಗಳನ್ನು ನೀಡುವ ಯೋಜನೆ ರೂಪಿಸುವುದಾಗಿ ಘೋಷಿಸಿದರು. ಸಭೆಯಲ್ಲಿ ಸಾಂಕೇತಿಕವಾಗಿ 10 ರೈತರಿಗೆ ಕಾಳುಮೆಣಸು ಮತ್ತು ಕಾಫಿ ಗಿಡಗಳನ್ನು ವಿತರಿಸಲಾಯಿತು. ಸದಸ್ಯರಾದ ಜಯರಾಮ ಮುಂಡೋಳಿಮೂಲೆ ಮಾತನಾಡಿ ಕೃಷಿಕ ಸದಸ್ಯರಿಂದ ಅಲ್ಪ ಮೊತ್ತ

ಪಡೆದು ಅಧ್ಯಯನ ಪ್ರವಾಸ ಏರ್ಪಡಿಸಲು ಸಲಹೆ ನೀಡಿದರು. ವಿವಿಧ ಚರ್ಚೆಗಳು ನಡೆದು ಅಜ್ಜಾವರ ಗ್ರಾಮಕ್ಕೆ 2 ಎಕರೆ ಭೂಮಿ ಖರೀದಿಸಲು ತೀರ್ಮಾನಿಸಲಾಯಿತು. ಸುಳ್ಯ ಮತ್ತು ಅಜ್ಜಾವರ ಶಾಖೆಯನ್ನು ಪ್ರತ್ಯೇಕಿಸುವ ಕುರಿತು ಸುದೀರ್ಘ ಚರ್ಚೆ ನಡೆದು ಸಂಘದ ಕ್ಷೇಮನಿಧಿಯು ಈಗ ಇರುವ ರೂ 4 ಕೋಟಿಯಿಂದ ರೂ 10.00 ಕೋಟಿಗಳಿಗೆ ಏರಿಕೆಯಾದ ನಂತರ ಈ ಬಗ್ಗೆ ಯೋಚನೆ ಮಾಡುವುದೆಂದು ಸಂಘದ ಮತ್ತು ಸದಸ್ಯರ ಹಿತದೃಷ್ಟಿಯಿಂದ ಸೂಕ್ತ ಎಂದು ತೀರ್ಮಾನಿಸಲಾಯಿತು. ದುಗಲಡ್ಕ ಶಾಖೆಯ ಕಟ್ಟಡ ಹಾಳಾಗಿದ್ದು ಹೊಸತಾಗಿ ನಿರ್ಮಾಣ ಮಾಡಲು ಕೆ.ಟಿ. ವಿಶ್ವನಾಥ್ ಸಲಹೆ ನೀಡಿದರು. ಅಧ್ಯಕ್ಷರಾದ ವಿಕ್ರಮ್ ಎ ವಿ ಮಾತನಾಡಿ ದುಗಲಡ್ಕ ಶಾಖೆಯ ಕಟ್ಟಡದ ರಸ್ತೆ ಮಾರ್ಜಿನ್ ವಿಚಾರ ಪರಿಶೀಲಿಸಬೇಕಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ

ತಿಳಿಸಿದರು.ಅಜ್ಜಾವರ ಶಾಖೆಗೆ ಶೀಟ್ ಅಳವಡಿಕೆ ಮಾಡುವುದಾಗಿ ಮತ್ತು ಸುಳ್ಯದ ಹಳೆ ಬ್ಯಾಂಕ್ ಕಟ್ಟಡಕ್ಕೆ ಶೀಟ್ ಅಳವಡಿಕೆ ಮಾಡಬೇಕಿದ್ದು ಮುಖ್ಯ ರಸ್ಥೆ ಅಗಲೀಕರಣ ಆಗಲಿದೆ ಎಂಬ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ 2026ನೇ ಮೇ ತಿಂಗಳೊಳಗೆ ಸುಳ್ಯಕ್ಕೆ ಬೈಪಾಸ್ ಅಥವಾ ಮುಖ್ಯ ರಸ್ಥೆ ಅಗಲೀಕರಣದ ಬಗ್ಗೆ ಗೊತ್ತಾಗಬಹುದಾಗಿದ್ದು ಬಳಿಕ ಶೀಟ್ ಅಳವಡಿಸಲು ಸದಸ್ಯರಾದ ಬಾಲಕೃಷ್ಣ, ದಾಮೋದರ ಮಂಚಿ ಕೆ ಮೊದಲಾದವರು ಸಲಹೆ ನೀಡಿದರು
ಮಹಾಸಭೆಯ ಸಂದರ್ಭ ಸಂಘದ ಕಾರ್ಯವ್ಯಾಪ್ತಿಯಲ್ಲಿ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ 7 ಜನ ಮಹಿಳಾ ಸಿಬ್ಬಂದಿಗಳಿಗೆ ಸಂಘದ ಆಡಳಿತ ಮಂಡಳಿ ವತಿಯಿಂದ ಗೌರವರ್ಪಣೆ ಏರ್ಪಡಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ತಲಾ ರೂ 2,000/- ದಂತೆ ಪ್ರೋತ್ಸಾಹಕವಾಗಿ ಶತಾಭ್ದಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದ ಸದಸ್ಯರ ಮಕ್ಕಳ ಪೈಕಿ ಈ ವರ್ಷ ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸ್ವರ್ಣಲತಾ ವೆಂಕಟ್ರಮಣ ಮುಳ್ಯ ಇವರನ್ನು ಮತ್ತು ಬಿ.ಎ.ಎಂ.ಎಸ್ ಪರೀಕ್ಷೆಯಲ್ಲಿ 8ನೇ ಸ್ಥಾನ ಗಳಿಸಿದ ಸನ್ನಿಧಿ ಶಿವರಾಮ ಕೇರ್ಪಳ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ ನಡುಮನೆ , ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ್ ಎಸ್ ಪಿ, ನಿರ್ದೇಶಕರಾದ ರಾಮಚಂದ್ರ ಎನ್.ಎ , ಪ್ರಬೋದ್ ಶೆಟ್ಟಿ ಎಂ , ವೆಂಕಟ್ರಮಣ ಎಂ , ಶಿವರಾಮ ಕೆ , ವಾಸುದೇವ ನಾಯಕ್ ಪಿ , ನವ್ಯ ಎ ಸಿ , ಹರಿಣಾಕ್ಷಿ ಬಿ,ಕೇಶವ ಸಿ ಎ. ಚಂದ್ರಶೇಖರ ಡಿ ಕೆ , ಹೇಮಂತ ಕೆ ಆರ್ , ಬಾಲಗೋಪಾಲ ಎಂ , ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ
ನವ್ಯ ಚಂದ್ರಶೇಖರ ವಂದಿಸಿದರು.












