ಸುಳ್ಯ: ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡ ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಸೆಮಿಫೈನಲ್ ಪ್ರವೇಶಿಸಿತು. ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡ ತಂಡ ಕಡಬ ಪ್ರೆಂಡ್ಸ್ ತಂಡವನ್ನು 47-35 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ಉಪಾಂತ್ಯ ಪಂದ್ಯಕ್ಕೆ
ಅರ್ಹತೆ ಪಡೆಯಿತು. ಪ್ರೋ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ, ರತನ್, ರೋಹಿತ್ ಮಾರ್ಲ, ಸುನಿಲ್ ಹನುಮಂತಪ್ಪ, ಸಚಿನ್ ಸುವರ್ಣ, ವಿಶ್ವರಾಜ್ ಸೇರಿ ಖ್ಯಾತ ಆಟಗಾರರನ್ನು ಒಳಗೊಂಡ ಬ್ಯಾಂಕ್ ಆಫ್ ಬರೋಡಾಕ್ಕೆ ಕಡಬ ಪ್ರೆಂಡ್ಸ್ ಪ್ರಬಲ ಹೋರಾಟ ನೀಡಿತು.
ಎರಡೂ ತಂಡಗಳು ಭರ್ಜರಿ
ದಾಳಿ ಮತ್ತು ಹಿಡಿತಗಳ ಮೂಲಕ ನಿರಂತರ ಅಂಕಗಳನ್ನು ಏರಿಸಿಕೊಂಡು ರೋಚಕ ಕ್ಷಣಗಳನ್ನು ನೀಡಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ಆಯೋಜಿಸಲಾಗಿತು.









