ಸುಳ್ಯ: ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತದಿಂದ ಮೂವರು ಕಾರ್ಮಿಕರು ಮೃತಪಟ್ಟ ದುರ್ಘಟನೆ ನಡೆದಿದ್ದು, ಅವರ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡುವ ನಿಟ್ಟಿನಲ್ಲಿ ಬಿಎಂಎಸ್ ಕಾರ್ಮಿಕ ಸಂಘಟನೆ ಶ್ರಮವಹಿಸಿದೆ ಎಂದು ಭಾರತೀಯ ಮಜ್ದೂರು ಸಂಘ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ಸುಳ್ಯ ತಾಲೂಕು ಪದಾಧಿಕಾರಿಗಳು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಂಎಸ್ ತಾಲೂಕು ಸಂಚಾಲಕ ಮಧುಸೂದನ್ ‘ಗುರುಂಪಿನಲ್ಲಿ ನಡೆದ
ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅವರಿಗೆ ಪರಿಹಾರ ಸಿಗಬೇಕೆಂದು ನಮ್ಮ ಸಂಘಟನೆ ಆಗ್ರಹಿಸಿದೆ. ಪರಿಹಾರವಾಗಿ ಪ್ರತಿಯೊಬ್ಬರ ಕುಟುಂಬಕ್ಕೆ ರೂ.5 ಲಕ್ಷದ ಬೇಡಿಕೆ ಇಟ್ಟಿದ್ದೆವು. ಚರ್ಚೆ ನಡೆದು ಎರಡೂವರೆ ಲಕ್ಷ ಪರಿಹಾರವನ್ನು ಜಾಗದ ಮಾಲಕ ಕೊಡುವುದೆಂದು ನಿರ್ಧರಿಸಲಾಗಿದೆ.ಅದೇ ದಿನ ಮೃತಪಟ್ಟ ಮೂವರ ಮನೆಯವರಿಗೂ ತಲಾ ರೂ.50 ಸಾವಿರದಂತೆ ನೀಡಿದ್ದಾರೆ. ಇದೆಲ್ಲವೂ ನಮ್ಮ ಮುಖಾಂತರ ಆದ ಮಾತುಕತೆಯ ಫಲವಾಗಿ ಆಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ 3 ಲಕ್ಷದವರೆಗೆ ಪರಿಹಾರ ದೊರಕಿಸುವ ಪ್ರಯತ್ನ ನಡೆಯುತಿದೆ. ಅಲ್ಲದೆ ಸಚಿವರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಸರಕಾರದಿಂದ ಪರಿಹಾರ ಒದಗಿಸುವ ಕುರಿತು ನಾವು ಬೇಡಿಕೆ ಇಟ್ಟಿದ್ದೇವೆ. ಸಚಿವ ಅಂಗಾರರು ಭರವಸೆಯನ್ನೂ ನೀಡಿದ್ದಾರೆ ಎಂದು ಮಧುಸೂದನ್ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ಕೆಲಸಗಳು ಆಗುತ್ತಿದೆ. ಗುಡ್ಡವನ್ನು ಅಗಿದು ಕೆಲಸಗಳು ಆಗುತ್ತಿರುವುದು ಅಲ್ಲಲ್ಲಿ ಕಂಡು ಬರುತಿದೆ. ಇದರ ವಿರುದ್ಧ ನ.ಪಂ. ಕ್ರಮ ಕೈಗೊಳ್ಳಬೇಕು ಮತ್ತು ಕೆಲಸ ವಹಿಸಿಕೊಳ್ಳುವ ಗುತ್ತಿಗೆದಾರರು ಕಾಮಗಾರಿ ವಹಿಸಿಕೊಳ್ಳುವಾಗ ಕಾರ್ಮಿಕರ ಮುಂಜಾಗರುಕತೆಯನ್ನು ನೋಡಿಕೊಳ್ಳಬೇಕು ಎಂದು ಅಗ್ರಹಿಸಿದರು. ಎಲ್ಲಾ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೊಡುವ ಕಾರ್ಡ್ ಪಡೆದುಕೊಳ್ಳಬೇಕು. ಹಾಗೂ ಅಲ್ಲಿ ಸಿಗುವ ಸವಲತ್ತು ಗಳನ್ನು ಪಡೆದು ಕೊಳ್ಳಬೇಕು. ನಮ್ಮ ಸಂಘಟನೆಯು ಕಾರ್ಮಿಕರ ನೋಂದಾವಣೆ ಮಾಡಿ ಕೊಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ನಾರಾಯಣ ಜಿ.ಎನ್. ಕೋಶಾಧಿಕಾರಿ ಮೋನಪ್ಪ ಉಪಸ್ಥಿತರಿದ್ದರು.