ಸುಳ್ಯ:ಕಾಂಗ್ರೆಸ್ಸಿನ ಹೈಕಮಾಂಡ್ ರಾಮಮಂದಿರದ ಉದ್ಘಾಟನೆಗೆ ಹೋಗುವುದಿಲ್ಲವೆಂದು ಈಗಾಗಲೇ ಘೋಷಿಸಿದ್ದರೂ ಸುಳ್ಯದ ಕಾಂಗ್ರೆಸ್ ನಾಯಕರು ರಾಮಮಂದಿರದ ಉದ್ಘಾಟನೆಯ ದಿವಸ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಸೇರಿ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿರುವುದು ಅಭಿನಂದನೀಯ ಎಂದು ಸುಳ್ಯ ಬಿಜೆಪಿ ಪ್ರತಿಕ್ರಿಯೆಸಿದೆ. ಸುಳ್ಯದ ಕಾಂಗ್ರೆಸ್ ನಾಯಕರು ರಾಷ್ಟ್ರೀಯ ನಾಯಕರಿಗೆ ಹಾಗೂ
ರಾಜ್ಯ ನಾಯಕರಿಗೆ ಸಡ್ಡು ಹೊಡೆದು ರಾಮ ಮಂದಿರದ ಉದ್ಘಾಟನೆಯ ದಿನ ಜನವರಿ 22ರಂದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ದೇವಸ್ಥಾನಗಳಲ್ಲಿ ಒಟ್ಟು ಸೇರಿ ಸಾಮೂಹಿಕ ಪೂಜೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿರುವುದು ಕಾಂಗ್ರೆಸ್ಸಿನ ಸ್ಥಳೀಯ ನಾಯಕರ ಒಳ ಮನಸ್ಸನ್ನು ಬಯಲು ಗೊಳಿಸಿದೆ. ರಾಜ್ಯದ ಮುಜರಾಯಿ ಇಲಾಖೆಯು ಜನವರಿ 22ರಂದು ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶ ಹೊರಡಿಸಿರುವುದನ್ನು ಅಭಿನಂದಿಸಿ ಸುಳ್ಯದ ಅನೇಕ ಕಾಂಗ್ರೆಸ್ ನಾಯಕರು ಬ್ಯಾನರ್ ಗಳನ್ನು ಅಳವಡಿಸಿ ರಾಮನ ಭಾವಚಿತ್ರವನ್ನು ಹಾಕುವ ಮೂಲಕ ತಾವುಗಳು ಕೂಡ ರಾಮಭಕ್ತರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಹಿಂದಿನಿಂದಲೂ ರಾಮಮಂದಿರದ ವಿರುದ್ಧವಾಗಿ ನಿಂತವರು. ಇದೀಗ ರಾಮ ಮಂದಿರದ ಉದ್ಘಾಟನೆಗೆ ಆಹ್ವಾನ ನೀಡಲಾಗಿದ್ದರು ಅದನ್ನು ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ದ ಸ್ಥಳೀಯ ನಾಯಕರು ಇದೀಗ ಅನಿವಾರ್ಯತೆಯ ಸಂದರ್ಭವನ್ನು ಉಪಯೋಗಿಸಿಕೊಂಡು ರಾಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ನಿಜವಾದ ರಾಮ ಭಕ್ತಿಯೋ ಅಥವಾ ರಾಮನನ್ನು ಮತ್ತು ಹಿಂದುತ್ವ ಶಕ್ತಿಯನ್ನು ಕಡೆಗಣಿಸಿದರೆ ತಮಗೆ ಉಳಿಗಾಲ ಇಲ್ಲ ಎನ್ನುವ ಭಯವೋ ತಿಳಿಯದು. ಆದರೂ ಅವರ ಈ ಹೇಳಿಕೆಗಳು ಕೇವಲ ಬಾಯಿಮಾತಿಗೆ ಸೀಮಿತಗೊಳ್ಳದೆ ಹಿಂದುತ್ವದ ಚಳುವಳಿಗೆ ಬೆಂಬಲ ನೀಡುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಬೇಕಾಗಿದೆ. ಸ್ಥಳೀಯ ಕಾರ್ಯಕರ್ತರಿಗೆ ಪೂಜೆಯಲ್ಲಿ ಭಾಗವಹಿಸುವ ಕರೆ ನೀಡುವುದು ಮಾತ್ರವಲ್ಲದೆ, ರಾಮಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರುವ ರಾಷ್ಟ್ರೀಯ ನಾಯಕರ ನಿಲುವನ್ನು ಕೂಡ ಸುಳ್ಯದ ಕಾಂಗ್ರೆಸ್ ನಾಯಕರು ಖಂಡಿಸಲಿ ಎಂದು ಸುಳ್ಯ ಬಿಜೆಪಿ ಪ್ರಕಟಣೆ ಅಗ್ರಹಿಸಿದೆ.









