ಮಂಗಳೂರು:ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಕಾರಣ ಉಪಹಾರ ಗೃಹಗಳು, ಕ್ಯಾಂಟೀನ್ಗಳು, ಹೋಟೆಲ್ಗಳು, ಬಾರ್ಗಳು, ಬೇಕರಿಗಳು ಮುಂತಾದ ಸಿದ್ಧಪಡಿಸಿದ ಆಹಾರಗಳನ್ನು ಮಾರಾಟ ಮಾಡುವ ಆಹಾರ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದ್ದಾರೆ.ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಇರುವುದರಿಂದ ಅಶುದ್ಧ
ನೀರಿನ ಮೂಲಗಳಿಂದ ಕುಡಿಯಲು ಹಾಗೂ ಆಹಾರ ಪದಾರ್ಥಗಳನ್ನು ಬೇಯಿಸಲು ನೀರನ್ನು ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಆಹಾರೋದ್ಯಮಿಗಳು ನೀರಿನ ಸಂಪು, ನೀರಿನ ಸಂಗ್ರಹಣಾ ಟ್ಯಾಂಕ್, ತೆರೆದ ಬಾವಿ ಕೊಳವೆಬಾವಿ ಮುಂತಾದ ನೀರಿನ ಮೂಲಗಳನ್ನು ಶುಚಿಗೊಳಿಸಬೇಕು.ಬೇಸಿಗೆ ಕಾಲದಲ್ಲಿ ಸರಿಯಾದ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸದಿರುವುದರಿಂದ ಆಹಾರ ವಿಷಪೂರಿತವಾಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಸೂಕ್ಷ್ಮಾಣು ಜೀವಿಗಳು ಮತ್ತು ಅವುಗಳಿಂದ ಬಿಡುಗಡೆಯವಾಗುವ ರಾಸಾಯನಿಕಗಳಿಂದ ಹೊಟ್ಟೆ ನೋವು, ವಾಂತಿ ಭೇದಿ, ನಿರ್ಜಲೀಕರಣ, ಕರುಳು ಬೇನೆ, ಮುಂತಾದ ರೋಗಗಳು ಬರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.ಸಾರ್ವಜನಿಕರಿಗೆ ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಲು ಕ್ರಮವಹಿಸಬೇಕು. ಅವಧಿ ಮೀರಿದ ಅಥವಾ ಹಳಸಿದ ಆಹಾರವನ್ನು ಸರಬರಾಜು ಮಾಡಬಾರದು. ಉಳಿದ ಆಹಾರವನ್ನು ಮರುಬಳಕೆ ಮಾಡಬಾರದು.ಉದ್ಯೋಗಿಗಳು, ಹೋಟೆಲ್ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು, ಸರಬರಾಜು ಮಾಡುವವರು ತಮ್ಮ ವೈಯಕ್ತಿಕ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು.ಏಪ್ರನ್, ಕೈಗವಸುಗಳು ಮತ್ತು ಹೆಡ್ಕವರ್ ಅನ್ನು ಧರಿಸಬೇಕು. ತಯಾರಿಸಿದ ಆಹಾರವನ್ನು ನೊಣ ಮುಂತಾದ ಕೀಟಗಳಿಂದ ರಕ್ಷಿಸಲು ಮುಚ್ಚಿಡಬೇಕು, ತೆರೆದಿಟ್ಟ ಆಹಾರ ಪದಾರ್ಥಗಳನ್ನು ಬಳಕೆ ಮಾಡಬಾರದು.
ಆಹಾರ ತಯಾರಿಸುವ ಸ್ಥಳ ಸ್ವಚ್ಛವಾಗಿರಬೇಕು.ಕೀಟಗಳಿಂದ ರಕ್ಷಿಸಲು ಈ ಕೊಠಡಿಗಳಲ್ಲಿನ ಕಿಟಕಿಗಳನ್ನು ತಂತಿ ಜಾಲರಿಗಳಿಂದ ಮುಚ್ಚಬೇಕು. ಬಾಗಿಲುಗಳು ಪರದೆಗಳನ್ನು ಹೊಂದಿರಬೇಕು.ಆಹಾರ ತಯಾರಿಸುವ ಜಾಗದಲ್ಲಿ ಸರಿಯಾಗಿ ಕೈತೊಳೆಯುವ ಜಾಗವನ್ನು ಮತ್ತು ಮುಚ್ಚಿದ ಕಸದ ತೊಟ್ಟಿಗಳನ್ನು ಒದಗಿಸಬೇಕು.ತರಕಾರಿಗಳು ಮತ್ತು ಹಣ್ಣುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡಬೇಕು ಹಾಗೂ ಸರಿಯಾಗಿ ತೊಳೆದ ಬಳಿಕ ಬಳಕೆ ಮಾಡಬೇಕು.ಮಂಜುಗಡ್ಡೆಗಳನ್ನು ತಯಾರಿಸುವ ಹಾಗೂ ಸರಬರಾಜು ಮಾಡುವ ಸಂಸ್ಥೆಯು ಮಂಜುಗಡ್ಡೆಯನ್ನು ಶುದ್ಧ ನೀರಿನಲ್ಲಿ ತಯಾರಿಸುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಹಾಗೂ ಮಂಜುಗಡ್ಡೆ ಸಂಗ್ರಹಿಸುವ ಪೆಟ್ಟಿಗೆಗಳು ಶುಚಿಯಾಗಿರುವಂತೆ ನೋಡಿಕೊಳ್ಳುವುದು. ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ಪಾತ್ರೆಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಿಡುವುದು. ಮಾಂಸ ಮತ್ತು ಮೀನಿನ ಸಂಗ್ರಹಣೆ ಮಾಡುವ ಶೀತಲ ಯಂತ್ರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಹಾಗೂ ತಾಪಮಾನವನ್ನು ನಾಲ್ಕು ಡಿಗ್ರಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು. ತಾಜಾ ಮೀನು ಮತ್ತು ತಾಜಾ ಮಾಂಸವನ್ನು ಬಳಸಿ ಆಹಾರ ತಯಾರಿಸಲು ಕ್ರಮವಹಿಸುವುದು. ಹಸಿ ಮೀನು ಮತ್ತು ಹಸಿ ಮಾಂಸ ಮಾರಾಟಗಾರರು ಮಾಂಸವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ತಾಜಾತನದಿಂದ ಕೂಡಿದ ಮಾಂಸವನ್ನು ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಶೈತ್ಯಾಗಾರಗಳಲ್ಲಿ ಸಂಗ್ರಹಿಸಿದ ಮಾಂಸ ಮತ್ತು ಮೀನನ್ನು ಮಾರಾಟ ಮಾಡಬಾರದು.
ಆಹಾರ ಸೇವೆಯ ಪ್ರದೇಶ ಸೂಕ್ತವಾದ ಸಲಕರಣೆಗಳೊಂದಿಗೆ ಆಹಾರವನ್ನು ನೀಡಬೇಕು ಮತ್ತು ಬರಿ ಕೈಗಳಿಂದ ಆಹಾರವನ್ನು ಮುಟ್ಟುವುದನ್ನು ತಪ್ಪಿಸಬೇಕು. ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಬಡಿಸಬೇಕು ಮತ್ತು ತಣ್ಣನೆಯ ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಬಡಿಸಬೇಕು. ಆಹಾರ ತಯರಿಸುವ, ಸೇವಿಸುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಯಾವುದೇ ಒಳಚರಂಡಿ ಸಮಸ್ಯೆಗಳಿಲ್ಲದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಹಾರ ತ್ಯಾಜ್ಯ ಮತ್ತು ಆಹಾರೇತರ ತ್ಯಾಜ್ಯ ಎರಡಕ್ಕೂ ಪ್ರತ್ಯೇಕ ಡಸ್ಟ್ಬಿನ್ಗಳನ್ನು ಹೊಂದಲು ಸೂಚಿಸಲಾಗಿದೆ. ಡಸ್ಟ್ಬಿನ್ಗಳನ್ನು ಅತಿಯಾಗಿ ತುಂಬಬಾರದು ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ವಿಲೇವಾರಿ ಮಾಡಬೇಕು.
ಕೀಟ ನಿಯಂತ್ರಣವನ್ನು ನಿಯಮಿತವಾಗಿ ಮಾಡಬೇಕು, ಮತ್ತು ಈ ಪ್ರದೇಶದಲ್ಲಿ ಯಾವುದೇ ಕೀಟಗಳಿದ್ದರೆ, ಆಹಾರ ತಯಾರಿಕೆ ಮತ್ತು ಸಂಸ್ಕರಣೆ ಮಾಡಲು ಯಾವುದೇ ಹಾನಿಯಾಗದಂತೆ ಆ ಪ್ರದೇಶದಿಂದ ಕೀಟಗಳನ್ನು ನಿರ್ಮೂಲನೆ ಮಾಡಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
ಬೀದಿಬದಿ ಆಹಾರ
ಬೀದಿಬದಿಗಳಲ್ಲಿ ಅಶುದ್ಧ ನೀರಿನಿಂದ ಮಾಡಿರುವ ಆಹಾರ ಪದಾರ್ಥಗಳು, ಜ್ಯೂಸ್, ಆರೋಗ್ಯಕ್ಕೆ ಮಾರಕವಾಗಿರುವ ಹಾನಿಕಾರಕ ರಾಸಾಯನಿಕಗಳನ್ನ ಬಳಸಿ ಮಾಡಲಾದ ಪಾನೀಯಗಳು ಇನ್ನಿತರ ಆಹಾರಗಳನ್ನು ಸೇವಿಸಬಾರದು. ನೈಸರ್ಗಿಕವಾಗಿ ಲಭ್ಯವಿರುವ ಎಳನೀರು, ಚೆನ್ನಾಗಿ ತೊಳೆದಿರುವ ತಾಜಾ ಹಣ್ಣು ಹಂಪಲುಗಳನ್ನು ಸೇವಿಸಬೇಕು.
ಎಲ್ಲಾ ದಿನಸಿ ಅಂಗಡಿಗಳು ಅಡುಗೆ ಕೋಣೆ ಇರುವ ಹಾಸ್ಟೆಲ್ಗಳು, ಅಡುಗೆ ಕೋಣೆ ಇರುವ ವಾಸ್ತವ್ಯ ಸೇವೆ ಒದಗಿಸುವವರು ಉಪಹಾರ ಗೃಹಗಳು, ಕ್ಯಾಂಟೀನ್, ಹೋಟೆಲ್, ಬಾರ್, ಬೇಕರಿ ಆಹಾರ ಉದ್ಯಮಿಗಳು, ಕಡ್ಡಾಯವಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಅಥವಾ ಪರವಾನಿಗೆ ಪಡೆದಿರಬೇಕು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.