ಸುಳ್ಯ:ಆರೋಹ ಫಿಲಂಸ್ ಬ್ಯಾನರ್ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿ ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶಿಸಿರುವ ‘ಭಾವ ತೀರ ಯಾನ’ ಸಿನಿಮಾ ಫೆ. 21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಶೈಲೇಶ್ ಅಂಬೆಕಲ್ಲು ‘ಕೌಟುಂಬಿಕ ಹಿನ್ನಲೆಯಲ್ಲಿ ವಿಭಿನ್ನ ಕಥೆಯನ್ನು ಹೊಂದಿರುವ
ಕುಟುಂಬ ಸಮೇತ ಎಲ್ಲರೂ ನೋಡಬಹುದಾದ ಮೌಲ್ಯಯುತವಾದ ಸಾಮಾಜಿಕ ಸಂದೇಶ ನೀಡುವ ಸಿನಿಮಾ ಇದಾಗಿದೆ ಎಂದು ಹೇಳಿದರು.
ಚಿತ್ರದ ನಿರ್ದೇಶಕ ಮಯೂರ್ ಅಂಬೆಕಲ್ಲು ಮಾತನಾಡಿ
‘ಪ್ರೀತಿ ಎಂಬ ವಿಷಯದ ಸುತ್ತ ಸಾಗುವ ಚಿತ್ರ ‘ಭಾವ ತೀರ ಯಾನ’. ಸುಂದರವಾದ ಪ್ರೇಮಕಥೆಯನ್ನು ಹೊಂದಿರುವಂತಹ ಚಿತ್ರ ಇದಾಗಿದ್ದು, 6 ವರ್ಷದಿಂದ 60 ವರ್ಷದವರೆಗಿನ ಪ್ರತಿಯೊಬ್ಬರಿಗೂ ಆಪ್ತವೆನಿಸುವಂತಹ ರೀತಿಯಲ್ಲಿ ಮೂಡಿಬಂದಿದೆ. ಪ್ರೀತಿಯ ಹೊಸ ಆಯಾಮವನ್ನು ಸಂಪೂರ್ಣ ಮನೋರಂಜನೆಯ ಮೂಲಕ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಸಜ್ಜಾಗಿದೆ. ಹಲವಾರು ಭಾವನಾತ್ಮಕ ಅಂಶಗಳು ಈ ಚಿತ್ರದಲ್ಲಿ

ಇರುವುದರಿಂದ ಈ ಚಿತ್ರಕ್ಕೆ ಹೊಂದುವಂತಹ ‘ಭಾವ ತೀರ ಯಾನ’ ಎಂಬ ಹೆಸರನ್ನು ಇಡಲಾಗಿದೆ. 20 ದಿನಗಳು ಚಿತ್ರೀಕರಣ ನಡೆದಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸಕಲೇಶಪುರ, ಮಂಗಳೂರು, ಸುಳ್ಯ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ತಾರಾಗಣದಲ್ಲಿ ರಮೇಶ್ ಭಟ್, ವಿದ್ಯಾಮೂರ್ತಿ, ತೇಜಸ್ ಕಿರಣ್, ಆರೋಹಿ ನೈನ, ಅನೂಷಾಕೃಷ್ಣ, ಚಂದನಾ ಅನಂತಕೃಷ್ಣ, ಸಂದೀಪ್ ರಾಜಗೋಪಾಲ್, ಸಿತಾರಾ, ಶ್ರೀನಿವಾಸ ಕೆಮ್ತೂರ್, ಶಮಾತ್ಮಿಕ, ವಿಭಾ ಡೊಂಗ್ರೆ ಮುಂತಾದವರು ನಟಿಸಿದ್ದಾರೆ.
ಈ ಚಿತ್ರಕ್ಕೆ ಶಿವಶಂಕರ್ ನೂರಂಬಡ ಛಾಯಾಗ್ರಹಣ, ಮಯೂರ್ ಅಂಬೆಕಲ್ಲು ಸಂಗೀತ, ಸುಪ್ರೀತ್ ಸಂಕಲನ, ವಿಶಾಕ್ ನಾಗಲಪುರ ಸಂಭಾಷಣೆ, ಮಯೂರ್ ನಾಯ್ಗ ಹಾಗೂ ಭಾನುಪ್ರಕಾಶ್ ಜೋಯ್ಸ್ ಸಾಹಿತ್ಯವಿದೆ. ಈ ಚಿತ್ರವನ್ನು ಕೀಳಂಬಿ ಮೀಡಿಯಾ ಲ್ಯಾಬ್ ಪ್ರಸ್ತುತಪಡಿಸುತ್ತಿದ್ದು, ಜನನಿ ಪಿಕ್ಚರ್ಸ್ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ ಎಂದು ಮಯೂರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ ನಟ ತೇಜಸ್ ಕಿರಣ್, ಸಹ ನಟ, ಸಂದೀಪ್ ರಾಜಗೋಪಾಲ್ ಮತ್ತಿತರರು ಇದ್ದರು.