ಬನಾರಿ:ಕಲೆಯ ಕಲಾರವ ಸರ್ವ ವ್ಯಾಪಿಯಾಗಿ ಎಲ್ಲೆಡೆ ಪಸತಿಸಿ ಎಲ್ಲರಿಗೂ ಸಿಗಲಿ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು. ಬನಾರಿ ಶ್ರೀ ಗೋಪಾಲಕೃಷ್ಣ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ವಿಶ್ವವಿನೋದ 75 ಯಕ್ಷಕಲಾರವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸುಪುತ್ರ ವಿಶ್ವವಿನೋದ ಬನಾರಿಯವರು ಭಾಗವತರಾಗಿ ಕವಿಯಾಗಿ
ಗುರುತಿಸಿಕೊಂಡವರು. ಸುಂದರವಾದ ಪರಿಸರದಲ್ಲಿ ಸುಂದರವಾದ ಕಲಾಮಂದಿರವನ್ನು ಕಟ್ಟಿ ಇಲ್ಲಿ ನಿರಂತರವಾಗಿ ಯಕ್ಷಗಾನ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿರುವುದು ಅವರ ಯಕ್ಷಗಾನದ ಶಕ್ತಿ ಮತ್ತು ಪ್ರೀತಿಯನ್ನು ತೋರಿಸುತ್ತದೆ. ಮುಂದೆಯೂ ಈ ಕ್ಷೇತ್ರಕ್ಕೆ ಅವರ ಸೇವೆ ಇರಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು.ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮಾತನಾಡಿ ಯಕ್ಷಗಾನದಲ್ಲಿ ಪ್ರತ್ಯುತ್ಪನ್ನಮತಿತ್ವ ಇದೆ. ಕಾವ್ಯ ಪುರಾಣ ಜ್ಞಾನ ಇರಬೇಕು. ವಿಭಿನ್ನ ಪರಿಸರದಿಂದ ವಿಭಿನ್ನ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಜಾತಿ, ಮತ, ಪ್ರಾಯ ಹೀಗೆ ಯಾವುದೇ ಭೇದಭಾವ ಎಣಿಸದೆ ಯಕ್ಷಗಾನ ಕಲಿಸಿಕೊಡುವುದು ಕೀರಿಕ್ಕಾಡು ಮಾಸ್ತರ್ ಅವರ ಗುರುಕುಲದಲ್ಲಿ ಮಾತ್ರವೇ ಸಾಧ್ಯವಿತ್ತು. ಅದೇ ಗುರುಕುಲ ಮಾದರಿಯಲ್ಲಿ ವಿಶ್ವವಿನೋದ ಬನಾರಿಯವರು ಯಕ್ಷಗಾನ ಭಾಗವತಿಕೆಯನ್ನು ತಮ್ಮ ಶಿಷ್ಯಂದಿರಿಗೆ ಕಲಿಸುತ್ತಿದ್ದಾರೆ. ಮುಂದೆಯೂ ಅವರಿಂದ ಇನ್ನಷ್ಟು ಶಿಷ್ಯರು ಬೆಳಕಿಗೆ ಬರಲಿ ಎಂದು ಅವರು ಶುಭ ಹಾರೈಸಿದರು. ಡಾ. ಸುಧಾಕರ ಭಟ್ ಸುಳ್ಯ ಉಪಸ್ಥಿತರಿದ್ದರು.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರು, ಹಿರಿಯ ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ಸ್ವಾಗತಿಸಿದರು. ರಮಾನಂದ ರೈ ದೇಲಂಪಾಡಿ ವಂದಿಸಿದರು. ಅಪರ್ಣಾ ರಾವ್ ಕುತ್ಯಾಡಿ, ಜಲಜಾಕ್ಷಿ ರೈ ಬೆಳ್ಳಿಪ್ಪಾಡಿ ಮತ್ತು ವಿಕೇಶ್ ರೈ ಶೇಣಿ ಅವರು ಕಾರ್ಯಕ್ರಮ ನಿರೂಪಿಸಿದರು.

ವಿಶ್ವಯಕ್ಷಗಾಯನಾಭಿವಂದನೆ:
ಕಾರ್ಯಕ್ರಮದ ಅಂಗವಾಗಿ ವಿಶ್ವವಿನೋದ ಬನಾರಿಯವರ ಶಿಷ್ಯವೃಂದದವರಿಂದ ‘ವಿಶ್ವಯಕ್ಷಗಾಯನಾಭಿವಂದನೆ’ ಕಾರ್ಯಕ್ರಮವು ಜರಗಿತು. ಗಣಪತಿ ಹವನ ಮತ್ತು ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಗಾನಾರ್ಚನೆಯಲ್ಲಿ ಸಾಯಿ ನಕ್ಷತ್ರ, ಪಾವನಾ ನೀರ್ಪಾಜೆ, ಅಭಿಜ್ಞಾ ಭಟ್ ನಾಟಿಕೇರಿ, ನಿತೀಶ್ ಕುಮಾರ್ ಎಂಕಣ್ಣಮೂಲೆ, ಶಶಿಧರ ತೆಕ್ಕೇಕರೆ, ನಾರಾಯಣ ತೋರಣಗಂಡಿ, ಚಂದ್ರಶೇಖರ ಉಬರಡ್ಕ, ಮನೋಹರ ಕಾಮತ್ ಕಾವು, ಮೋಹನ ಮೆಣಸಿನಕಾನ, ದಯಾನಂದ ಬಂದ್ಯಡ್ಕ, ವಿದ್ಯಾಭೂಷಣ ಪಂಜಾಜೆ, ದಯಾನಂದ ಪಾಟಾಳಿ ಮಯ್ಯಾಳ ಅವರು ಭಾಗವತರಾಗಿ ತಮ್ಮ ಕಲಾ ಪ್ರತಿಭೆಯನ್ನು ತೋರ್ಪಡಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ವಿಷ್ಣುಶರಣ ಬನಾರಿ, ಸಹಕರಿಸಿದರು.