ಮಂಗಳೂರು: ತೆಂಕು ತಿಟ್ಟಿನ ಪ್ರಸಿದ್ಧ ಮೇರು ಭಾಗವತರಾದ ಬಲಿಪ ನಾರಾಯಣ ಭಾಗವತರು(85) ಇಂದು ಸಂಜೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಬಲಿಪ ಪರಂಪರೆಯ ಕಂಠಸಿರಿ ಮೂಲಕ ಬಲಿಪ ನಾರಾಯಣ ಭಾಗವತರು ಸುಮಾರು ಆರು ದಶಕಗಳ ಕಾಲ ಭಾಗವತರಾಗಿ ಜನಮಾನಸದಲ್ಲಿ ನೆಲೆಯಾಗಿದ್ದರು. ಸಾಂಪ್ರದಾಯಿಕ ಭಾಗವತಿಕೆಗೆ ಪರ್ಯಾಯ ಹೆಸರಾಗಿ ಬಲಿಪ ಭಾಗವತರು ಖ್ಯಾತಿ ಗಳಿಸಿದ್ದರು. ದ.ಕ. ಜಿಲ್ಲೆಯ ಮೂಡುಬಿದರೆ ಸಮೀಪ

ವಾಸವಾಗಿದ್ದರು.ಕಟೀಲು ಮೇಳದಲ್ಲಿ ಸುದೀರ್ಘ ಕಾಲ (42 ವರ್ಷ) ಭಾಗವತರಾಗಿ ದುಡಿದಿದ್ದರು. ತಂದೆಯಿಂದಲೇ ಭಾಗವತಿಕೆ ಕಲಿತು, ಅಜ್ಜನ ಪ್ರಭಾವದಿಂದ ಭಾಗವತಿಕೆಯಲ್ಲಿ ಪಕ್ವಗೊಂಡಿದ್ದರು. ಅಜ್ಜ ಹಾಡುತ್ತಿದ್ದ ಯಕ್ಷಗಾನದ ಪಾರಂಪರಿಕ ಶೈಲಿಯಲ್ಲೇ ಭಾಗವತಿಕೆ ನಡೆಸಿದ್ದರು.14ನೇ ವಯಸ್ಸಿಗೆ ಬಲಿಪ ನಾರಾಯಣ ಭಾಗವತರು ಜಾಗಟೆ ಹಿಡಿದು ಭಾಗವತಿಕೆ ಪ್ರಾರಂಭಿಸಿದ್ದರು. ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪ ಭಾಗವತರಿಗಿತ್ತು. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ವರನ್ನು ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಾರೆ.
ಬಲಿಪ ಭಾಗವತರು ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 13 ಮಾರ್ಚ್ 1938ರಂದು ಜನಿಸಿದ್ದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಪತ್ನಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಭಾಗವತರು. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು. ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿದ್ದ ಪ್ರಸಾದ ಬಲಿಪರು ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು.