ಅರಂಬೂರು: ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.15ರಿಂದ ಆರಂಭಗೊಂಡ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ವಿಜ್ರಂಭಣೆಯಿಂದ ನಡೆಯುತಿದೆ. ಸೋಮವಾರ ರಾತ್ರಿ ದೈವಗಳ ವೆಳ್ಳಾಟ್ಟಂ ನಡೆದು ಭಕ್ತರಿಗೆ ಅನುಗ್ರಹ ನೀಡಿತು. 3 ಶತಮಾನದ ಬಳಿಕ ನಡೆದ ದೈವಂಕಟ್ಟು ಮಹೋತ್ಸವಕ್ಕೆ ಹರಿದು ಬಂದ
ಸಹಸ್ರಾರು ಮಂದಿ ಭಕ್ತರು ದೈವಗಳ ವೆಳ್ಳಾಟಂ ಕಣ್ತುಂಬಿಕೊಂಡರು. ರಾತ್ರಿ ನಡೆದ ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ ಭಕ್ತರ ಮೈ,ಮನ ರೋಚಾಂಚನಗೊಳಿಸಿತು.ಅಂಗಣ ಪ್ರವೇಶಿಸಿ ನೆರೆದ ಸಾವಿರಾರು ಭಕ್ತರಿಗೆ ದರ್ಶನ ನೀಡಿ ಹರಸಿದ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ವೀಕ್ಷಿಸಲು ನಾಡಿನ ನಾನಾ ಕಡೆಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಬಳಿಕ

ಚಿತ್ರಗಳು: ಅವಿನ್ ಫೋಟೋಗ್ರಫಿ ಸುಳ್ಯ
ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ನಡೆಯಿತು. ಶ್ರೀ ವಿಷ್ಣುಮೂರ್ತಿ ದೈವದ ಕೂಡುವಿಕೆ ನಡೆಯಿತು.
ಸಂಜೆ ಕಾರ್ನೋನ್ ಕೋರಚ್ಛನ್ ದೈವದ ವೆಳ್ಳಾಟ್ಟಂ ನಡೆಯಿತು.
ಇಂದು(ಮಾ.18)ರಂದು ಬೆಳಗ್ಗಿನಿಂದ ಕಾರ್ನೋನ್ ದೈವ, ಕೊರಚ್ಛನ್ ದೈವ, ಕಂಡನಾರ್ ಕೇಳನ್ ದೈವಗಳು ನಡೆದ ಅಪರಾಹ್ನ 4 ರಿಂದ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ, ಶ್ರೀ ವಿಷ್ಣುಮೂರ್ತಿ ದೈವ ಅಂಗಣ ಪ್ರವೇಶ ಮಾಡಲಿದೆ.
ಹರಿದು ಬಂದ ಜನ ಸಾಗರ:
ಮಂಗಳವಾರ ರಾತ್ರಿ ನಡೆದ ಕಾರ್ನೋನ್ ದೈವ, ಕೋರಚ್ಚನ್ ದೈವ, ಕಂಡನಾರ್ ಕೇಳನ್ ಹಾಗು ಶ್ರೀ ವಯನಾಟ್ ಕುಲವನ್ ದೈವಗಳ ವೆಳ್ಳಾಟಂ ದರ್ಶನ ಪಡೆಯಲು ಭಕ್ತ ಜನ ಸಾಗರವೇ ಹರಿದು ಬಂತು. ದಕ್ಷಿಣ ಕನ್ನಡ, ಕೊಡಗು ಹಾಗೂ

ನೆರೆಯ ಕೇರಳ ರಾಜ್ಯದಿಂದ ಭಕ್ತರ ಗಡಣವೇ ಆಗಮಿಸಿತು. ಕ್ಷೇತ್ರ ಪರಿಸರ ಹಾಗೂ ಸಮೀಪ ಪ್ರದೇಶದಲ್ಲಿ ಭಕ್ತರಿಂದ ತುಂಬಿ ತುಳುಕಿತ್ತು.ಸುಮಾರು 15 ಸಾವಿರಕ್ಕೂ ಮಿಕ್ಕಿ ಜನರು ಸೇರಿದ್ದರು ಎಂದು ಅಂದಾಜಿಸಲಾಗಿದೆ.
ಅಚ್ಚುಕಟ್ಟಾದ ವ್ಯವಸ್ಥೆ:
ದೈವಂಕಟ್ಟು ಮಹೋತ್ಸವಕ್ಕೆ ಆಗಮಿಸಿದ ಭಕ್ತರ ಅನುಕೂಲಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆಗಮಿಸಿದ ಎಲ್ಲರಿಗೂ ನಿರಂತರ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ವಾಹನ ಪಾರ್ಕಿಂಗ್ಗೂ ವಿವಿಧ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ಸುತ್ತಲೂ ವರ್ಣಮಯ ವಿದ್ಯುತ್ ದೀಪಾಲಂಕಾರ ಝಗಮಗಿಸಿತ್ತು. ಎಲ್ಲೆಡೆ ತಳಿರು ತೋರಣ, ಬ್ಯಾನರ್, ಬಂಟಿಂಗ್ಸ್ಗಳಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಸ್ವಾಗತ

ಗೋಪುರಗಳು, ದ್ವಾರಗಳು ನಿರ್ಮಿಸಿ ಭಕ್ತರಿಗೆ ಸ್ವಾಗತ ಕೋರಲಾಗುತಿದೆ. ಸಿಡಿಲಬ್ಬರದ ಸಿಡಿ ಮಡ್ಡಿನ ಪ್ರಯೋಗ ಆಕಾಶದಲ್ಲಿ ವರ್ಣ ವಿಸ್ಮಯ ಸೃಷ್ಠಿಸಿತು.
ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಆಡಳಿತ ಸಮಿತಿ ಕೋಶಾಧಿಕಾರಿ ರಧೀಶನ್ ಅರಂಬೂರು, ಕುಟುಂಬದ ಯಜಮಾನ ಕುಂಞಿಕಣ್ಣ.ಎ, ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ನಾರಾಯಣ ಕೇಕಡ್ಕ, ರಾಧಾಕೃಷ್ಣ ಪರಿವಾರಕಾನ, ಕುಂಞಿರಾಮನ್ ಶ್ರೀಶೈಲಂ, ಮಹೋತ್ಸವ ಸಮಿತಿ, ಆಡಳಿತ ಸಮಿತಿ ಹಾಗೀ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರ ನೇತೃತ್ವದಲ್ಲಿ ಉತ್ಸವ ನಡೆಯುತಿದೆ.















