*ಗಣೇಶ್ ಮಾವಂಜಿ.
ರಜೆ ಸಿಕ್ಲಿಕ್ಕೆ ಪುರ್ಸೊತಿಲ್ಲ.,ಈ ಮಕ್ಕಳಿಗೆ ಮೂರು ಹೊತ್ತು ಕೂಡಾ ಆಟ…ಅದರಲ್ಲಿ ಎಂತ ಸಿಗ್ತದೋ ಗೊತ್ತಿಲ್ಲ . ಒಮ್ಮೊಮ್ಮೆ ಊಟ, ತಿಂಡಿಗೂ ಪುರ್ಸೊತಿಲ್ಲದೆ ಆಟ ಆಡಿಕೊಂಡಿರ್ತಾರೆ. ಈ ಮಕ್ಕಳನ್ನು ಸರಿ ಮಾಡುವುದು ಹೇಗೆಯೋ…
ಬೇಸಿಗೆ ರಜೆಯ ಮಜಾ ಉಡಾಯಿಸುವ ಮಕ್ಕಳ ಬಗ್ಗೆ ಸಾಮಾನ್ಯವಾಗಿ ಹೆತ್ತವರ ಬಾಯಿಯಿಂದ ಹೊರಡುವ ಸುಪ್ರಭಾತವಿದು.ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಹೆಂಗಸರು, ಗಂಡಸರು ಜೊತೆಯಾದಾಗ ಅವರವರ ಮನೆಯ ಮಕ್ಕಳ ಬಗ್ಗೆ ರಂಗುರಂಗಿನ ವರ್ಣನೆ ಇದೇ ರೀತಿ ಇರುತ್ತದೆ.
‘ನೀವೇಂತ ಹೇಳ್ತೀರಿ?…ನಮ್ಮ ಮನೆಯಲ್ಲಿ ಮಕ್ಕಳು ಬೆಳಿಗ್ಗೆ ಏಳುವುದೇ ಹೊತ್ತು ನೆತ್ತಿಗೇರುವ ವೇಳೆಗೆ. ಮುಖ ತೊಳೆದು ಬಂದ ಕೂಡಲೇ
ಮೊಬೈಲ್ ಉಜ್ಜಲು ಹೊರಟರೆ ಹೊಟ್ಟೆಗೆ ಇಲ್ಲದಿದ್ದರೂ ಆಗ್ತದೆ. ಮಾಮೂಲಿ ತಿಂಡಿಗಳನ್ನು ಮೂಸಿಯೂ ನೋಡದ ಅವರಿಗೆ ಐಸ್ಕ್ರೀಂ, ಮಿಕ್ಸರ್, ಪಾನಿಪೂರಿ ಸಿಕ್ಕಿದ್ರೆ ಬೇರೇನೂ ಬೇಡ’…ಹೀಗೆ ತಮ್ಮ ಮನೆಯ ಮಕ್ಕಳ ಪುರಾಣ ಬಿಚ್ಚಿಡ್ತಾರೆ.
ನಿಜವಾಗಿಯೂ ಈ ಮಾತುಗಳಲ್ಲಿ ತಪ್ಪೇನೂ ಇರುವುದಿಲ್ಲ. ಏಕೆಂದರೆ ಎಲ್ಲಾ ಮಕ್ಕಳ ಕಥೆಯೂ ಹೀಗೆಯೇ ಇರ್ತದೆ. ಆದರೆ ಬುದ್ಧಿಗಾಗಿ ಮಕ್ಕಳ ಕಿವಿ ಹಿಂಡುವ ಮೊದಲೊಮ್ಮೆ ಹಿರಿಯರು ಯೋಚಿಸಲೇ ಬೇಕು. ಹೀಗೆಲ್ಲಾ ಮಕ್ಕಳ ಪುರಾಣ ಬಿಚ್ಚಿಡುವ ಹಿರಿಯರು ತಾವು ಮಕ್ಕಳಾಗಿದ್ದಾಗ ಯಾವುದೇ ಆಟ ಅಡಿರಲಿಲ್ಲವೇ? ಅಥವಾ ಆಟ ಆಡದೆ ಎಲ್ಲೋ ಮುದುಡಿ, ಮಂಕಾಗಿ ಕುಳಿತ ಮಕ್ಕಳನ್ನು ಮಕ್ಕಳೆಂದು ಒಪ್ಪಿಕೊಳ್ಳಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ.

ಏಕೆಂದರೆ ಬಾಲ್ಯದಲ್ಲಿ ಆಟ ಆಡದೆ ಇದ್ದರೆ ಆ ಮಗುವಿನ ದೈಹಿಕ ಬೆಳವಣಿಗೆಯಲ್ಲೋ, ಅಥವಾ ಮಾನಸಿಕ ಸ್ಥಿತಿಗತಿಯಲ್ಲೋ, ಅಥವಾ ಇನ್ಯಾವುದೋ ವಿಷಯದಲ್ಲಿ ಕಿಂಚಿತ್ತಾದರೂ ಲೋಪ ಇದೆ ಎಂದೇ ಅರ್ಥೈಸಿಕೊಳ್ಳಬೇಕು. ಎಲ್ಲರಂತೆ ಮಕ್ಕಳು ಆಟವಾಡಿಕೊಂಡಿರದಿದ್ದರೆ, ಮಕ್ಕಳೊಂದಿಗೆ ಬೆರೆಯದೆ ಏಕಾಂಗಿಯಾಗಿ ಸೂರು ದಿಟ್ಟಿಸುತ್ತಾ ಕುಳಿತಿದ್ದರೆ ‘ನನ್ನ ಮಗು ಪಾಪ. ಏನೂ ಉಪದ್ರ ಮಾಡುವುದಿಲ್ಲ’ ಎಂದು ಸಂಭ್ರಮಿಸುವ ಬದಲಾಗಿ ಮಕ್ಕಳ ತಜ್ಞರತ್ತ ತೋರಿಸುವುದೊಳಿತು. ಏಕೆಂದರೆ ಬಾಲ್ಯದಲ್ಲಿ ಮಕ್ಕಳಾಟವೇ ಚಂದ.
ಮಕ್ಕಳಾಟದ ಬಗ್ಗೆ ಅಪಸ್ವರ ಎತ್ತುವ ಹಿರಿಯರಾದ ನಾವು ಮಕ್ಕಳಾಗಿದ್ದಾಗ ಆಟ ಆಡಿ ಅಂಗಳ ಹುಡಿ ಮಾಡಿದ ಬಗ್ಗೆ ಮರೆತೇ ಹೋಗಿರುತ್ತೇವೆ. ಅಪ್ಪ, ಅಮ್ಮ ಬೆಳಿಗ್ಗೆ ಬೇಗ ಏಳಬೇಕೆಂದು ಹೊದಿಕೆ ಸರಿಸಿದರೂ ಮತ್ತೆ ಸುರುಟಿ ಮಲಗಿ ಬೆನ್ನಿಗೆ ಬಿಸಿಲು ಬೀಳುವವರೆಗೂ ಏಳದಿದ್ದದ್ದು, ಮಾವಿನ ಮರಕ್ಕೆ ಕಲ್ಲು ಬಿಸಾಡಿ ಇದ್ದ ಮಿಡಿಗಳನ್ನೆಲ್ಲಾ ಉದುರಿಸಿ ಬೋಳು ಮಾಡಿದ್ದು, ಮನೆಗೆ ನೆಂಟರು ಬಂದಾಗ ಇಲ್ಲದ ಹೊಟ್ಟೆಬೇನೆ ವಕ್ಕರಿಸುವಂತಾಗಿ ಶಾಲೆಗೆ ರಜೆ ಮಾಡಿ ಮನೆಯಲ್ಲೇ ಕುಳಿತದ್ದು…, ಹೀಗೆ ಸಾಲು ಸಾಲು ತಪ್ಪುಗಳನ್ನು ಮಾಡಿರುತ್ತೇವೆ.
ಅಷ್ಟೇ ಅಲ್ಲ. ಪರೀಕ್ಷೆಯಲ್ಲಿ ಸೊನ್ನೆ ಸುತ್ತಿದರೂ ಈಗ ಮಕ್ಕಳ ಪ್ರಗತಿ ಪತ್ರ ಕೈಗೆ ಸೇರಿ ಅಂಕ ಡಿಸ್ಟಿಂಕ್ಷನ್ ದಾಟದಿದ್ದರೆ ಸಹಿ ಹಾಕಲು ನಖರಾ ಮಾಡುತ್ತೇವೆ. ಚಿಕ್ಕಂದಿನಲ್ಲಿ ನಾವು ಮಣ್ಣು ಕಲಸಿ ಪಾಯಸ ಮಾಡುವ ಆಟವಾಡಿದ್ದರೂ ಈಗ ನಮ್ಮ ಮಕ್ಕಳು ಮಣ್ಣಲ್ಲಿ ಆಟವಾಡಲು ಹೊರಟರೆ ಗದರಿ ಸ್ವಚ್ಛತೆಯ ಪಾಠ ಬೋಧಿಸುತ್ತೇವೆ. ಹರಿಯುವ ತೋಡಿಗೆ ಕಟ್ಟ ಹಾಕಿ ನೀರು ನಿಲ್ಲುವಂತೆ ಮಾಡಿ ಲಾಗ ಹೊಡೆದೇ ಈಜು ಕಲಿತರೂ ನಮ್ಮ ಮಕ್ಕಳು ನೀರಿಗಿಳಿಯುವ ಸಾಹಸಕ್ಕೆ ಮುಂದಾದಾಗ ಜಾಗ್ರತೆಯ ಸಂದೇಶ ರವಾನಿಸುತ್ತೇವೆ. ಅದಕ್ಕೆ ಬದಲಾಗಿ ದುಬಾರಿ ಬೆಲೆ ತೆತ್ತು ಈಜು ಕಲಿಸುವ ಶಿಬಿರಕ್ಕೆ ಮಕ್ಕಳನ್ನು ದೂಡಿಬಿಡುತ್ತೇವೆ.

ಇದೆಲ್ಲವೂ ನಮ್ಮ ಗತಕಾಲದ ತಪ್ಪುಗಳನ್ನು ಮರೆಮಾಚಿ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನಗಳಾದರೂ ಕೆಲವೊಂದು ತಪ್ಪುಗಳನ್ನು ನಾವೀಗಲೂ ಮಾಡಿ ಮಕ್ಕಳು ಮಾತ್ರ ಆ ತಪ್ಪುಗಳನ್ನು ಮಾಡಬಾರದೆಂದು ಅಪೇಕ್ಷಿಸುತ್ತೇವೆ. ಸಮಯ ಸಿಕ್ಕಾಗಲೆಲ್ಲಾ ಮೊಬೈಲ್ ಹಿಡಿದು ಉಜ್ಜುವ ನಾವುಗಳು ಮಕ್ಕಳು ಅದೇ ತಪ್ಪನ್ನು ಮಾಡಿದಾಗ ಮಾತ್ರ ದುರ್ವಾಸ ಮುನಿಗಳಾಗುತ್ತೇವೆ. ತುಟಿಗಳೆಡೆಯಲ್ಲಿ ಸಿಗರೇಟ್, ಬೀಡಿ ತುರುಕಿ ಸುರುಳಿಸುರುಳಿಯಾಗಿ ಹೊಗೆ ಬಿಡುವ ಪೋಷಕರು ತಮ್ಮ ಮಕ್ಕಳು ಮಾತ್ರ ದುರಭ್ಯಾಸಗಳತ್ತ ಕಣ್ಣೆತ್ತಿಯೂ ನೋಡಬಾರದು ಎಂದು ಲೆಕ್ಚರ್ ಬಿಡುತ್ತಾರೆ. ಗುಟ್ಕಾ, ಬೀಡಾ ತಿಂದು ಹಲ್ಲು ಕೆಂಪಗಾಗಿಸುವ ಮಂದಿ ತಮ್ಮ ಮಕ್ಕಳು ಮಾತ್ರ ಅದರತ್ತ ಆಸಕ್ತಿ ಬೆಳೆಸದಂತೆ ಬೇಲಿ ಕಟ್ಟಲು ಹವಣಿಸುತ್ತಾರೆ. ತಾವು ಆಲ್ಕೋಹಾಲ್ ದಾಸರಾದರೂ ತಮ್ಮ ಮಕ್ಕಳು ಹಾಲುಂಡೇ ಬೆಳೆಯಬೇಕೆನ್ನುವ ಇರಾದೆ ಪೋಷಕರದ್ದಾಗಿರುತ್ತದೆ.
ಅದಕ್ಕೂ ಮಿಗಿಲಾಗಿ ಹದಿಹರೆಯದಲ್ಲಿ ಪ್ರೀತಿಯ ಮಾಯೆಗೆ ಮರುಳಾಗಿ ದಾರಿಯಲ್ಲಿ ಹೋಗುವ ಕಾಲೇಜು ಕನ್ಯೆಯರಿಗೆ ಕಣ್ಣು ಹೊಡೆದವರು, ಹುಡುಗರಲ್ಲಿ ಇಲ್ಲದ ಆಸೆ ಹುಟ್ಟಿಸಿ ಕೊನೆಗೆ ಕೈ ಕೊಟ್ಟವರು, ಅಮಾಯಕರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಲ್ಕಿತ್ತವರು ಕೂಡಾ ತಮ್ಮ ಮಕ್ಕಳು ಹರೆಯಕ್ಕೆ ಬಂದಾಗ ಪ್ರೀತಿ ಸುಳ್ಳೆಂದು ಬೊಗಳೆ ಬಿಡುತ್ತಾರೆ. ಕಣ್ಣು ಹೊಡೆದರೆ ಹಲ್ಲುದುರಿಸುವ ಆವಾಜ್ ಹಾಕುತ್ತಾರೆ. ಹರೆಯದಲ್ಲಿ ತಾವೇ ಜಾರಿ ಪಾತಾಳ ಸೇರಿದವರೂ ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಇನ್ನಿಲ್ಲದ ಕಸರತ್ತು ಮಾಡುತ್ತಿರುತ್ತಾರೆ.
ತಾವು ಹಾಳಾಗಿದ್ದು ಸಾಕು. ತಮ್ಮ ಮಕ್ಕಳು ಹಾಳಾಗಬಾರದು ಎಂಬ ಹಿರಿಯರ ದೂರಾಲೋಚನೆಯನ್ನು ಗೌರವಿಸೋಣ. ಆದರೆ ಮಕ್ಕಳು ಕಣ್ಣು ಬಿಡುವ ವೇಳೆಗೆ ಹಿರಿಯರಾದ ನಾವೇ ಅದೇ ತಪ್ಪುಗಳನ್ನು ಮಾಡುತ್ತಿದ್ದರೆ ಮಕ್ಕಳಿಗೆ ನೀತಿಪಾಠ ಬೋಧಿಸುವ ಅಧಿಕಾರ ನಮಗೆಲ್ಲಿರುತ್ತದೆ?

ಹಾಗೆಂದು ರಜೆ ಸಿಕ್ಕಿದ ಕೂಡಲೇ ಎಲ್ಲವನ್ನೂ ಮರೆತು ಆಟ ಆಡುತ್ತಲೇ ಇರಬೇಕೆಂದಾಗಲೀ ಅಥವಾ ಆಟ ಆಡಿದ್ದನ್ನು ಪ್ರಶ್ನಿಸುವ ಪೋಷಕರನ್ನು, ಹಿರಿಯರನ್ನು ‘ನೀವು ಆಟ ಆಡಿರಲಿಲ್ಲವೇ?’ ಎಂದು ಮರುಪ್ರಶ್ನಿಸಬೇಕೆಂದಾಗಲೀ ಅಥವಾ ಕಲಿಯುವ ಹಂತದಲ್ಲಿ ಪ್ರೀತಿಗೆ ಬಿದ್ದು ಬಾಳು ಹಾಳು ಮಾಡಿಕೊಳ್ಳಿ ಎಂಬುದಾಗಿ ನನ್ನ ಸಲಹೆ ಅಲ್ಲವೇ ಅಲ್ಲ. ರಜೆಯ ಮೋಜಿಗೊಂದು ಮಿತಿ ಇರಲಿ. ಮಕ್ಕಳ ಬಾಲ್ಯದಾಟಕ್ಕೆ ಕಡಿವಾಣ ಇಲ್ಲದಿರಲಿ. ಅತಿಯಾದ ಮೊಬೈಲ್ ಬಳಕೆಗೆ ಲಗಾಮು ಇರಲಿ. ನಾವೇ ತಪ್ಪುಗಳನ್ನು ಮಾಡಿಕೊಂಡು ಆ ತಪ್ಪುಗಳನ್ನು ಮಕ್ಕಳು ಮಾಡಬಾರದೆಂದು ಅಪೇಕ್ಷಿಸಿದರೆ ಅದರಲ್ಲಿ ಸಫಲತೆ ಸಾಧಿಸುವುದು ಕಷ್ಟ ಎಂಬುದಷ್ಟೇ ನನ್ನ ಮಾತಿನ ಒಳಾರ್ಥ.

(ಗಣೇಶ್ ಮಾವಂಜಿ ಪತ್ರಕರ್ತರು ಹಾಗೂ ಅಂಕಣಕಾರರು)