ಸುಳ್ಯ: ಅಜ್ಜಾವರ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲ ಇದರ ಆಶ್ರಯದಲ್ಲಿ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಆಟೋಟ ಸ್ಪರ್ಧೆ ಜುಲೈ 30 ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲದ ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ಮಾತನಾಡಿ ನಮ್ಮೂರಿನ ಯುವಕ ಮತ್ತು ಯುವತಿ ಮಂಡಲ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆಟೋಟ
ಸ್ಪರ್ಧೆಯಲ್ಲಿ ಮಕ್ಕಳು, ಮಹಿಳೆಯರು,ಪುರುಷರು, ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು. ಕಳೆದ ವರ್ಷವೂ ಕೂಡ ಈ ರೀತಿಯ ಆಟೋಟ ಸ್ಪರ್ಧೆ ನಮ್ಮ ಸಂಘದ ವತಿಯಿಂದ ಆಯೋಜಿಸಿದ್ದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕಿನ ಯಾವುದೇ ಭಾಗಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸುವವರು ಪಾಲ್ಗೊಳ್ಳಬಹುದಾಗಿದೆ ಎಂದು ಹೇಳಿದರು.
ಸ್ಪರ್ಧಿಗಳಲ್ಲಿ ಒಂದನೇ ತರಗತಿಯಿಂದ ನಾಲ್ಕನೇಯ ತರಗತಿಯವರೆಗೆ ಮೂರು ಜನರ ಕಂಬಳ ಕೆಸರು ಗದ್ದೆ ಓಟ ಹುಡುಗ ಹುಡುಗಿಯರಿಗೆ ಪ್ರತ್ಯೇಕ, ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಕಂಬಳ ಮೂರು ಜನರ ಕೆಸರು ಗದ್ದೆ ಓಟ, ಇದರಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಕಂಬಳ ಕೆಸರುಗದ್ದೆ ಓಟ,
ಮಹಿಳೆಯರಿಗೆ ಕೆಸರು ಗದ್ದೆ ಓಟ, ನಿಂಬೆ ಚಮಚ ಓಟ, ಹಗ್ಗ ಜಗ್ಗಾಟ, ನೇಜಿ ಪಾಡ್ದನ ವೈಯುಕ್ತಿಕ, ಪುರುಷರಿಗೆ ಕೆಸರು ಗದ್ದೆ ಓಟ ಕಂಬಳ ಮೂರು ಜನ, ವಾಲಿಬಾಲ್,ಹಗ್ಗ ಜಗ್ಗಾಟ ದಂಪತಿಗಳಿಗೆ ಉಪ್ಪು ಮುಡಿ, ಹಾಳೆಯಲ್ಲಿ ಎಳೆಯುವುದು, ಹಿರಿಯ ನಾಗರಿಕರಿಗೆ ಕೆಸರುಗದ್ದೆ ಓಟ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಬೆಳಿಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದ್ದು ಸಾಮಾಜಿಕ ರಾಜಕೀಯ ಧಾರ್ಮಿಕ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಹಂಚಿನ ಮನೆ ಮಾತನಾಡಿ ಈ ನಿರಂತರ ಎರಡನೇ ವರ್ಷ ಈ ರೀತಿಯ ವಿಶೇಷತೆ ಮತ್ತು ವಿಭಿನ್ನತೆಯಿಂದ ಕೂಡಿರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಾಪ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ರಾಜ್ ಕರ್ಲಪ್ಪಾಡಿ, ಕೋಶಾಧಿಕಾರಿ ಲೋಕೇಶ್ ಮಾವಿನಪಳ್ಳ, ಚೈತ್ರ ಯುವತಿ ಮಂಡಲದ ಖಜಾಂಜಿ ರಜನಿ ಗೋರಡ್ಕ, ಸದಸ್ಯರಾದ ಲಕ್ಷ್ಮಿ ಪಳ್ಳತ್ತಡ್ಕ, ವೇದಾವತಿ ಕರ್ಲಪ್ಪಾಡಿ ಉಪಸ್ಥಿತರಿದ್ದರು.