ಸುಳ್ಯ: ಪುತ್ತೂರು ಉಪ ವಿಭಾಗದ ನೂತನ ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಗುರುವಾರ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಸ್ಪತ್ರೆಯ ಪ್ರತಿ ವಾರ್ಡ್, ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದ ಕಮಿಷನರ್ ಸ್ವಚ್ಚತೆ ಬಗ್ಗೆ ಗಮನ ಹರಿಸಲು ಸೂಚನೆ ನೀಡಿದರು. ದಾಸ್ತಾನು ಕೊಠಡಿ, ಅಡುಗೆ ಕೋಣೆ, ಮುಖ್ಯ ಉಗ್ರಾಣಗಳಿಗೆ ತೆರಳಿ ವೀಕ್ಷಣೆ ನಡೆಸಿ
ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ಸಣ್ಣ ಪುಟ್ಟ ರಿಪೇರಿ, ಫ್ಯಾನ್ ಅಳವಡಿಕೆಗೆ ಸೂಚನೆ ನೀಡಿದರು.
ತಂಬಾಕು ವಿರುದ್ದ ಕ್ರಮಕ್ಕೆ ಸೂಚನೆ :
ಆಸ್ಪತ್ರೆ ಮತ್ತು ಶಾಲೆಯ ಸುತ್ತ ಮುತ್ತ ಮಾರಾಟ ಆಗುವ ತಂಬಾಕು, ಸಿಗರೇಟ್, ಗುಟ್ಕಾ ಮರಾಟ ಮಾಡುವವರ ಮೇಲೆ ದಂಡ ಹಾಕಬೇಕು. ಇದಕ್ಕೂ ನಿಯಂತ್ರಣ ಆಗದಿದ್ದರೆ ಕೇಸು ದಾಖಲಿಸಬೇಕು ಎಂದರು. ಶಾಲೆಯ ಸುತ್ತಮುತ್ತ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆರೋಗ್ಯ ಇಲಾಖೆಯ ಕಡೆಯಿಂದ ಆಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಅಂಬ್ಯುಲೆನ್ಸ್ ಬಗ್ಗೆ ಮಾಹಿತಿ ಪಡೆದ ಸಹಾಯಕ ಕಮಿಷನರ್ ಸೂಕ್ತ ನಿರ್ವಹಣೆಗೆ ಸೂಚಿಸಿದರು. ಅಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಹೊರರೋಗಿಗಳನ್ನು ವಿಚಾರಿಸಿದರು. ವಾರ್ಡ್ಳಿಗೆ ತೆರಳಿ ಒಳರೋಗಿಗಳನ್ನು ಆಸ್ಪತ್ರೆಯಲ್ಲಿ ಯಾವ ರೀತಿ ಸೇವೆ ಸಿಗುತ್ತಿದೆ ಎಂಬುದನ್ನು ವಿಚಾರಿಸಿದರು. ಅಲ್ಲದೇ ಆಸ್ಪತ್ರೆಯಲ್ಲಿರುವ ವೈದ್ಯರುಗಳ ಸಂಖ್ಯೆ, ಸಿಬ್ಬಂದಿಗಳ ಸಂಖ್ಯೆ, ಸಿಬ್ಬಂದಿ ಕೊರತೆಗಳ ಮಾಹಿತಿ ಪಡೆದುಕೊಂಡರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕರುಣಾಕರ ಕೆ.ವಿ. ಮಾತನಾಡಿ 25 ಲಕ್ಷ ವೆಚ್ಚದಲ್ಲಿ ಶವಾಗಾರದ ಕೆಲಸ ಪೂರ್ಣಗೊಂಡಿದೆ. ಅಲ್ಲದೇ 50 ಲಕ್ಷ ವೆಚ್ಚದಲ್ಲಿ ರಕ್ತ ಪರೀಕ್ಷಾ ಕೇಂದ್ರದ ಕೆಲಸಗಳು ಅಂತಿಮ ಹಂತದಲ್ಲಿದೆ. ಇದರೊಂದಿಗೆ 1.5 ಕೋಟಿ ವೆಚ್ಚದಲ್ಲಿ ದ್ರವಿಕೃತ ಆಮ್ಲಜನಕ ಘಟಕ, ತುರ್ತು ಚಿಕಿತ್ಸಾ ಘಟಕದ ವಿಸ್ತರಣೆ ಮತ್ತು ಐಸೋಲೇಶನ್ ವಾರ್ಡ್ ಕೆಲಸಗಳು ನಡೆಯುತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್. ಜಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾಮ ಸಹಾಯಕ ತಿಪ್ಪೇಶಪ್ಪ ಮೊದಲಾದವರು ಇದ್ದರು.









