ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಜು.22 ರಂದು ಆಟಿ ಕೂಟ ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿದ್ದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತುಳುನಾಡಿನ ವಿಶೇಷ ಹಬ್ಬವಾದ ಆಟಿ ಬಗ್ಗೆ ಹಾಗೂ ತುಳುನಾಡಿನ
ಸಂಸ್ಕೃತಿ ಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಪೋಷಕರಾದ ಶ್ವೇತ ಆಟಿಯ ಸಂದರ್ಭದಲ್ಲಿ ಬರುವಂತಹ ದೈವಗಳ ಬಗ್ಗೆ ಹಾಗೂ ಆಟಿಯ ವಿಶೇಷ ಖಾದ್ಯದಲ್ಲಿ ಇರುವಂತ ಔಷಧಿ ಗುಣಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪೋಷಕರಿಗಾಗಿ ಚೆನ್ನಮಣೆ ಆಟವನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಪೋಷಕರು ತಯಾರಿಸಿದಂತಹ ಆಟಿಯ ವಿಶೇಷ ಖಾದ್ಯಗಳನ್ನು ಒಟ್ಟಾಗಿ ಕುಳಿತು ಸವಿದು ಸಂಭ್ರಮಿಸಿದರು.ಸಂಸ್ಥೆಯ ಪುಟಾಣಿ ಮಕ್ಕಳು ಆಟಿ ಕಳಂಜನ ನೃತ್ಯಕ್ಕೆ ಹೆಜ್ಜೆ ಹಾಕಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಹಾಗೂ ಸಂಸ್ಥೆಯ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ನಿರ್ಮಲ ಕಾರ್ಯಕ್ರಮ ನಿರೂಪಿಸಿದರು.