ರಾಜ್ಕೋಟ್: ಇಂಗ್ಲೆಂಡ್ ವಿರುದ್ಧ ರಾಜ್ಕೋಟ್ನಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 26 ರನ್ ಅಂತರದ ಸೋಲನುಭವಿಸಿದೆ ಮೊದಲ ಎರಡು ಪಂದ್ಯ ಗೆದ್ದ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಹ್ಯಾಟ್ರಿಕ್ ಸೋಲನ್ನು ತಪ್ಪಿಸಿರುವ ಆಂಗ್ಲರ ಪಡೆ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ಇಂಗ್ಲೆಂಡ್ ನೀಡಿದ
172 ರನ್ಗಳ ಗುರಿ ಬೆನ್ನಟ್ಟಿದ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಐದು ವಿಕೆಟ್ಗಳ ಸಾಧನೆ ಮಾಡಿದರೂ ಬ್ಯಾಟಿಂಗ್ ವೈಫಲ್ಯದಿಂದ ಭಾರತ ಸೋಲನುಭವಿಸಿತು. ವರುಣ್ ನಾಲ್ಕು ಓವರ್ಗಳಲ್ಲಿ 24 ರನ್ ಬಿಟ್ಟುಕೊಟ್ಟು ಐದರ ಗೊಂಚಲು ಪಡೆದರು.
ಸುಮಾರು 14 ತಿಂಗಳುಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಬಲಗೈ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಪುನರಾಗಮನ ಮಾಡಿದರು. ಎಡಗೈ ಆರಂಭಿಕ ಆಟಗಾರ ಬೆನ್ ಡಕೆಟ್, ಮಧ್ಯಮ ಕ್ರಮಾಂಕದ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ನಾಯಕ ಜೋಸ್ ಬಟ್ಲರ್ ಉಪಯುಕ್ತ ಆಟದ ನೆರವಿನಿಂದ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಕೆಟ್ 28 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಲಿವಿಂಗ್ಸ್ಟೋನ್ 24 ಎಸೆತಗಳಲ್ಲಿ 43 ಮತ್ತು ಬಟ್ಲರ್ 24 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಆ ಮೂಲಕ ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತು.ಭಾರತದ
ಸಂಜು ಸ್ಯಾಮ್ಸನ್ 3, ಅಭಿಷೇಕ್ ಶರ್ಮಾ 24, ನಾಯಕ ಸೂರ್ಯಕುಮಾರ್ ಯಾದವ್ 14, ತಿಲಕ್ ವರ್ಮಾ 18, ವಾಷಿಂಗ್ಟನ್ ಸುಂದರ್ 6, ಅಕ್ಷರ್ ಪಟೇಲ್ 15 ಹಾಗೂ ಧ್ರುವ್ ಜುರೇಲ್ 2 ರನ್ ಗಳಿಸಿ ಔಟ್ ಆದರು.ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿದರೂ ಪಂದ್ಯದ ಗತಿ ಬದಲಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ ಜೇಮಿ ಓವರ್ಟನ್ ಮೂರು, ಜೋಫ್ರಾ ಆರ್ಚರ್ ಹಾಗೂ ಬ್ರೈಡನ್ ಕರ್ಸ್ ತಲಾ ಎರಡು ಮತ್ತು ಮಾರ್ಕ್ ವುಡ್ ಹಾಗೂ ಆದಿಲ್ ರಶೀದ್ ತಲಾ ಒಂದು ವಿಕೆಟ್ಗಳನ್ನು ಗಳಿಸಿದರು.ಸರಣಿಯ ಮುಂದಿನ ಪಂದ್ಯ ಪುಣೆಯಲ್ಲಿ ಜ.31ರಂದು ನಡೆಯಲಿದೆ.